ADVERTISEMENT

ಸುಲಿಗೆ ಆರೋಪ: ಅತ್ಯಾಚಾರ ಸಂತ್ರಸ್ತೆ ಬಂಧನ

ಸ್ವಾಮಿ ಚಿನ್ಮಯಾನಂದಗೆ ₹5ಕೋಟಿ ಬೇಡಿಕೆ ಇಟ್ಟ ಆರೋಪ: 14 ದಿನಗಳ ನ್ಯಾಯಾಂಗ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 20:00 IST
Last Updated 25 ಸೆಪ್ಟೆಂಬರ್ 2019, 20:00 IST
ಶಹಜಹಂಪುರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕಾನೂನು ವಿದ್ಯಾರ್ಥಿನಿಯನ್ನು ಕರೆದೊಯ್ಯುತ್ತಿರುವ ಪೊಲೀಸರು  ಪಿಟಿಐ ಚಿತ್ರ
ಶಹಜಹಂಪುರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕಾನೂನು ವಿದ್ಯಾರ್ಥಿನಿಯನ್ನು ಕರೆದೊಯ್ಯುತ್ತಿರುವ ಪೊಲೀಸರು  ಪಿಟಿಐ ಚಿತ್ರ   

ಲಖನೌ: ಬಿಜೆಪಿ ಹಿರಿಯ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿಯನ್ನು ಬುಧವಾರ ಬೆಳಿಗ್ಗೆ ಸುಲಿಗೆ ಆರೋಪದಡಿಯಲ್ಲಿ ಬಂಧಿಸಲಾಗಿದೆ.

ಲೈಂಗಿಕ ವಿಡಿಯೊಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ವಿದ್ಯಾರ್ಥಿನಿಯ ಮೂವರು ಸ್ನೇಹಿತರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಸ್ವಾಮಿ ಚಿನ್ಮಯಾನಂದ ದೂರು ಸಲ್ಲಿಸಿದ್ದರು. ಈ ಮೂವರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ವಿದ್ಯಾರ್ಥಿನಿಯ ಹೆಸರನ್ನು ಸೇರಿಸಲಾಗಿತ್ತು.

ವಿದ್ಯಾರ್ಥಿನಿಯ ಮೂವರು ಸ್ನೇಹಿ ತರಾದ ಸಂಜಯ್‌ಸಿಂಗ್‌, ಸಚಿನ್‌ ಸೆನೆಗಾರ್‌ ಮತ್ತು ವಿಕ್ರಂ ಅಲಿಯಾಸ್‌ ದುರ್ಗೇಶ್‌ ಅವರನ್ನು ಶುಕ್ರವಾರ ಬಂಧಿ ಸಲಾಗಿತ್ತು. ಬಂಧನದ ಸಂದರ್ಭ ವಿದ್ಯಾರ್ಥಿನಿ ವಾಸಿಸುತ್ತಿದ್ದ ಶಹಜ ಹಂಪುರ ಪ್ರದೇಶದಲ್ಲಿ ಬಿಗಿ ಬಂದೋ ಬಸ್ತ್‌ ಕೈಗೊಳ್ಳಲಾಗಿತ್ತು. 23 ವರ್ಷದ ವಿದ್ಯಾರ್ಥಿನಿಯನ್ನು ಹೆಚ್ಚುವರಿ ಜ್ಯೂಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿತು.

ADVERTISEMENT

ಬಂಧನದ ಬಳಿಕ ವಿದ್ಯಾರ್ಥಿನಿ ಪರ ವಕೀಲ ಅನೂಪ್‌ ತ್ರಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದೆ.

ಬಂಧನಕ್ಕೆ ಮುನ್ನವೇ ವಿದ್ಯಾರ್ಥಿನಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಯನ್ನು ಶಹಜಹಂಪುರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಸ್ವೀಕರಿಸಿದ್ದು, ಗುರುವಾರ ವಿಚಾರಣೆ ನಡೆಯಲಿದೆ. ಅತ್ಯಾಚಾರ ಪ್ರಕರಣದ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು (ಎಸ್‌ಐಟಿ) ಬೆಳಿಗ್ಗೆ ಮನೆ ಮೇಲೆ ದಾಳಿ ನಡೆಸಿ ವಿದ್ಯಾರ್ಥಿನಿಯನ್ನು ಎಳೆದೊಯ್ದರು ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.

ಚಿನ್ಮಯಾನಂದ ವಿರುದ್ಧದ ಪ್ರಕರಣವನ್ನು ವಾಪಸ್‌ ಪಡೆಯುವಂತೆ ಒತ್ತಡ ಹೇರಲು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

‘ವಿದ್ಯಾರ್ಥಿನಿಯನ್ನು ಎಳೆದೊಯ್ದರು’

ಅತ್ಯಾಚಾರ ಪ್ರಕರಣದ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು (ಎಸ್‌ಐಟಿ) ಬೆಳಿಗ್ಗೆ ಮನೆ ಮೇಲೆ ದಾಳಿ ನಡೆಸಿ ವಿದ್ಯಾರ್ಥಿನಿಯನ್ನು ಎಳೆದೊಯ್ದರು ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.

ಚಿನ್ಮಯಾನಂದ ವಿರುದ್ಧದ ಪ್ರಕರಣವನ್ನು ವಾಪಸ್‌ ಪಡೆಯುವಂತೆ ಒತ್ತಡ ಹೇರಲು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

‘ಒತ್ತಾಯದಿಂದ ಆಕೆಯನ್ನು ಎಳೆದೊಯ್ದರು. ದಾಖಲೆಗಳನ್ನು ಸಹ ತೋರಿಸಲಿಲ್ಲ. ಚಪ್ಪಲಿ ಸಹ ಹಾಕಿಕೊಳ್ಳಲು ಎಸ್‌ಐಟಿ ತಂಡ ಅವಕಾಶ ನೀಡಲಿಲ್ಲ’ ಎಂದು ವಿದ್ಯಾರ್ಥಿನಿಯ ತಂದೆ ದೂರಿದ್ದಾರೆ.

‘ಜಾಮೀನು ಅರ್ಜಿಯ ವಿಚಾರಣೆ ಗುರುವಾರ ನಡೆಯವುದಿತ್ತು. ಹಾಗಿದ್ದರೂ ಬಂಧಿಸುವ ಅವಸರವೇನಿತ್ತು’ ಎಂದು ಅವರು ಪ್ರಶ್ನಿಸಿದ್ದಾರೆ.

ಚಿನ್ಮಯಾನಂದ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.

ಸಾಕಷ್ಟು ಸಾಕ್ಷ್ಯಾಧಾರಗಳಿವೆ: ಎಸ್ಐಟಿ

ಸ್ವಾಮಿ ಚಿನ್ಮಯಾನಂದ ಅವರಿಂದ ₹5 ಕೋಟಿ ಹಣ ವಸೂಲಿ ಮಾಡುವ ಕುರಿತು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತರು ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ತನ್ನ ಬಳಿ ಇದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕವೇ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

‘ವಿದ್ಯಾರ್ಥಿನಿಯ ಸೂಚನೆ ಮೇರೆಗೆ ಸ್ವಾಮಿ ಚಿನ್ಮಯಾನಂದ ಅವರಿಗೆ ಮೂವರು ಬಂಧಿತರು ಸಂದೇಶಗಳನ್ನು ಕಳುಹಿಸಿದ್ದರು. ಆದರೆ, ಹಣ ಸಿಗದ ಕಾರಣ ಅವರಿಗೆ ಬೇಸರವಾಗಿತ್ತು ಎಂದು ತಿಳಿಸಿದ್ದಾರೆ. ಡಿಜಿಟಲ್‌ ಮತ್ತು ವಿಧಿವಿಜ್ಞಾನ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕ ಮತ್ತು ಹಲವು ಮಂದಿಯ ಹೇಳಿಕೆ ಪಡೆದ ನಂತರವೇ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ’ ಎಂದು ಎಸ್‌ಐಟಿ ಮುಖ್ಯಸ್ಥ ನವೀನ್‌ ಅರೋರಾ ವಿವರಿಸಿದ್ದಾರೆ.

‘ಸ್ವಾಮಿ ಚಿನ್ಮಯಾನಂದ ಬಿಜೆಪಿ ಸದಸ್ಯರಲ್ಲ’

ಸ್ವಾಮಿ ಚಿನ್ಮಯಾನಂದ ಅವರು ಬಿಜೆಪಿ ಸದಸ್ಯರಲ್ಲ ಎಂದು ಪಕ್ಷದ ವಕ್ತಾರ ಹರಿಶ್ಚಂದ್ರ ಶ್ರೀವಾಸ್ತವ್‌ ತಿಳಿಸಿದ್ದಾರೆ.

ಆದರೆ, ಯಾವ ದಿನಾಂಕದಿಂದ ಸದಸ್ಯರಲ್ಲ ಎನ್ನುವುದನ್ನು ತಿಳಿಸಲು ನಿರಾಕರಿಸಿದರು.

‘ಪಕ್ಷದ ಎಲ್ಲ ದಾಖಲೆಗಳು ಈಗ ಡಿಜಿಟಲ್‌ಗೆ ಪರಿವರ್ತಿಸಲಾಗಿದೆ. ಹೀಗಾಗಿ, ಯಾವ ದಿನದಿಂದ ಅವರು ಪಕ್ಷದ ಸದಸ್ಯರು ಎನ್ನುವುದನ್ನು ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು.

***

ಚಿನ್ಮಯಾನಂದ ಅವರಿಂದ ₹5ಕೋಟಿ ವಸೂಲಿ ಮಾಡಲು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತರು ರೂಪಿಸಿದ್ದ ಯೋಜನೆ ಕುರಿತು ನಮ್ಮಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ.
-ನವೀನ್‌ ಅರೋರಾ, ಎಸ್‌ಐಟಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.