ನವದೆಹಲಿ: ಮಹಿಳಾ ಸಹಪಾಠಿ ಜತೆ ಮಾತನಾಡಿದ್ದಕ್ಕೆ 12ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಿರಿಯ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿ, ಆತನ ಬೆರಳುಗಳನ್ನು ಕತ್ತರಿಸಿರುವ ಘಟನೆ ದೆಹಲಿಯ ದಕ್ಷಿಣ ದ್ವಾರಕದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿ ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ಈಗಾಗಲೇ ಪದವಿಯನ್ನೂ ಮುಗಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 21 ರಂದು ಘಟನೆ ನಡೆದಿದ್ದು, ಭಯಗೊಂಡಿದ್ದ ವಿದ್ಯಾರ್ಥಿ, ಬೈಕ್ ಚೈನ್ಗೆ ಕೈ ಸಿಲುಕಿ ಬೆರಳುಗಳು ಕತ್ತರಿಸಿವೆ ಎಂದು ಪೋಷಕರಿಗೆ ಸುಳ್ಳು ಹೇಳಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ, ನೈಜ ಘಟನೆಯ ಬಗ್ಗೆ ಪೋಷಕರಿಗೆ ವಿದ್ಯಾರ್ಥಿ ತಿಳಿಸಿದ್ದಾನೆ. ಬಳಿಕ ದಾಖಲಾದ ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ.
‘ಆರೋಪಿಯು ನನ್ನನ್ನು ಶಾಲೆಯ ಹೊರಗಡೆ ಭೇಟಿಯಾಗಿ ಪಾರ್ಕ್ಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಮಹಿಳಾ ಸಹಪಾಠಿ ಜತೆಗಿನ ಸ್ನೇಹದ ಬಗ್ಗೆ ತಕರಾರು ಎತ್ತಿ, ಕಲ್ಲಿನಿಂದ ಹಲ್ಲೆ ಮಾಡಿದ್ದ’ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಪೊಲೀಸರ ಬಳಿ ಹೇಳಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.