ನವದೆಹಲಿ: ಉಕ್ರೇನ್ನಿಂದ ನಿರ್ಗಮಿಸಲು ಭಾರತದ ವಿದ್ಯಾರ್ಥಿಗಳಿಗೆ ಅಲ್ಲಿನ ವಿಶ್ವವಿದ್ಯಾಲಯಗಳು ಆರಂಭದಲ್ಲಿ ಸ್ಪಂದಿಸಲಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು. ಈ ಕುರಿತು ಹೇಳಿಕೆ ನೀಡಿರುವ ಅವರು, ಉಕ್ರೇನ್ನಿಂದ ಸುಮಾರು 22,500 ಭಾರತೀಯರನ್ನು ಕರೆತರಲಾಗಿದೆ ಎಂದು ತಿಳಿಸಿದ್ದಾರೆ.
‘ನಮ್ಮ ಪ್ರಯತ್ನಗಳ ನಡುವೆಯೂ ಹೆಚ್ಚಿನ ವಿದ್ಯಾರ್ಥಿಗಳು ಉಕ್ರೇನ್ ಅನ್ನು ತೊರೆಯಲು ನಿರಾಕರಿಸಿದರು. ನಮ್ಮ ಸಂಕಟವನ್ನೂ ಅರ್ಥಮಾಡಿಕೊಳ್ಳಬೇಕು. ಕಲಿಕೆಗೆ ತೊಡಕಾಗುವಂತೆ ಶಿಕ್ಷಣ ಸಂಸ್ಥೆ ತೊರೆಯಲು ಸಹಜವಾಗಿಯೇ ಆಗ ವಿರೋಧ ವ್ಯಕ್ತವಾಯಿತು. ಕೆಲವು ವಿಶ್ವವಿದ್ಯಾಲಯಗಳು ತೊರೆಯದಂತೆ ಪ್ರೇರೇಪಿಸಿದವು. ಆನ್ಲೈನ್ ತರಗತಿಯನ್ನು ನಡೆಸಲಾಗದು ಎಂದು ಪ್ರತಿರೋಧ ತೋರಿದವು. ಸುರಕ್ಷತೆ ಕುರಿತಂತೆ ಅನೇಕರು ನಮ್ಮ ಸಲಹೆ ಸ್ವೀಕರಿಸಲಿಲ್ಲ’ ಎಂದು ಜೈಶಂಕರ್ ಹೇಳಿದ್ದಾರೆ.
‘ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಸರ್ಕಾರವು ಮೊದಲೇ ಸಜ್ಜಾಗಿತ್ತು. ಫೆ.24ರ ವೇಳೆಗೆ ಗೊಂದಲದ ಸ್ಥಿತಿ ಇತ್ತು. ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎಂಬ ವರದಿಗಳು ಹೆಚ್ಚಿನ ಗೊಂದಲವನ್ನು ಮೂಡಿಸಿದ್ದವು. ಇದರ ಒಟ್ಟು ಪರಿಣಾಮವಾಗಿ ಸುಮಾರು 18,000 ಭಾರತೀಯರು ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಕ್ಕಿಬಿದ್ದಿದ್ದರು’ ಎಂದಿದ್ದಾರೆ.
‘ರಕ್ಷಣೆ ಕಾರ್ಯಾಚರಣೆಗೂ ಮೊದಲೇ 4 ಸಾವಿರ ವಿದ್ಯಾರ್ಥಿಗಳು ವಿಮಾನದ ಮೂಲಕ ಉಕ್ರೇನ್ ತೊರೆದಿದ್ದರು. ಅಲ್ಲದೆ, ಭಾರತವು ನೇಪಾಳ, ಬಾಂಗ್ಲಾದೇಶ ನಾಗರಿಕರು ಸೇರಿದಂತೆ 18 ದೇಶಗಳ 147 ವಿದೇಶಿಯರನ್ನು ಉಕ್ರೇನ್ನಿಂದ ಸುರಕ್ಷಿತವಾಗಿ ಕರೆತಂದಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.