ADVERTISEMENT

ಸುನಂದಾ ಪುಷ್ಕರ್ ಸಾವಿನ ಪ್ರಕರಣ: ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಖುಲಾಸೆ

ಪಿಟಿಐ
Published 18 ಆಗಸ್ಟ್ 2021, 6:53 IST
Last Updated 18 ಆಗಸ್ಟ್ 2021, 6:53 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ: ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ದೆಹಲಿ ಹೈಕೋರ್ಟ್‌ ಬುಧವಾರ ಖುಲಾಸೆಗೊಳಿಸಿದೆ.

ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್‌ ಅವರು ಬುಧವಾರ ವರ್ಚುವಲ್‌ ವಿಚಾರಣೆ ವೇಳೆ ಈ ಆದೇಶ ನೀಡಿದ್ದಾರೆ.

ನ್ಯಾಯಾಧೀಶರಿಗೆ ಕೃತಜ್ಞತೆ ಸಲ್ಲಿಸಿರುವ ತರೂರು ಅವರು,‘ಕಳೆದ ಏಳು ವರ್ಷದಿಂದ ಇದರಿಂದಾಗಿ ನಾನು ಚಿತ್ರಹಿಂಸೆ ಅನುಭವಿಸಿದ್ದೆ. ಈಗ ನನಗೆ ದೊಡ್ಡ ಪರಿಹಾರ ಸಿಕ್ಕಿದೆ’ ಎಂದು ಹೇಳಿದರು.

ADVERTISEMENT

ಶಶಿ ತರೂರ್‌ ವಿರುದ್ಧ ಹಲವು ಆರೋಪಗಳನ್ನು ದಾಖಲಿಸುವಂತೆ ಪೊಲೀಸರುನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಶಿ ತರೂರ್‌ ಪರ ವಕೀಲ ವಿಕಾಸ್‌ ಪಹ್ವಾ,‘ಈಗಾಗಲೇ ಎಸ್‌ಐಟಿಯು ಶಶಿ ತರೂರ್‌ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ’ ಎಂದು ವಾದಿಸಿದರು.

2014ರ ಜನವರಿ 17ರಂದು ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿಸುನಂದಾ ಪುಷ್ಕರ್‌ ಅವರ ಶವ ಪತ್ತೆಯಾಗಿತ್ತು. ಶಶಿ ತರೂರ್‌ ಅವರ ಅಧಿಕೃತ ಬಂಗಲೆ ನವೀಕರಣ ನಡೆಯುತ್ತಿದ್ದರಿಂದ ದಂಪತಿ ಹೋಟೆಲ್‌ನಲ್ಲಿ ತಂಗಿದ್ದರು.

ಇದಾದ ಬಳಿಕ ತರೂರ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ, ಅವರನ್ನು ಬಂಧಿಸಿರಲಿಲ್ಲ. ಈ ಪ್ರಕರಣದಲ್ಲಿ ತರೂರ್‌ ಅವರಿಗೆ 2018ರ ಜುಲೈ 5ರಂದು ಜಾಮೀನು ಮಂಜೂರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.