ಚಂಡೀಗಡ: ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಸುನಿಲ್ ಜಾಖರ್ ವಿರುದ್ಧ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜ ಕಿಡಿಕಾರಿದ್ದಾರೆ. ಜಾಖರ್ ಅವರು ಆ ಪಕ್ಷಕ್ಕಾಗಿ (ಬಿಜೆಪಿಗಾಗಿ) ಕೆಲಸ ಮಾಡುವುದನ್ನು ತುಂಬಾ ಹಿಂದೆಯೇ ಆರಂಭಿಸಿದ್ದರು ಎಂದು ಆರೋಪಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಜಾಖರ್ ಕಳೆದ ವಾರವಷ್ಟೇಪಕ್ಷಕ್ಕೆ ವಿದಾಯ ಹೇಳಿದ್ದರು. ನವದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಜೆ.ಪಿ.ನಡ್ಡಾ (ಬಿಜೆಪಿ ಅಧ್ಯಕ್ಷ) ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಈ ಕುರಿತು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಅಮರೀಂದರ್, ಜಾಖರ್ ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ರೀತಿಯಿಂದಲೂ ಹಾನಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಇದೇನು ಅನಿರೀಕ್ಷಿತವಲ್ಲ. ಸುನಿಲ್ ಜಾಖರ್ ಇಂದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ನಿರ್ಲಜ್ಜ ಹಿಂದುತ್ವ ರಾಜಕಾರಣ ಮಾಡುವ ಮೂಲಕ ತುಂಬಾ ಹಿಂದೆಯೇ ಆ ಪಕ್ಷಕ್ಕಾಗಿ ಕೆಲಸ ಆರಂಭಿಸಿದ್ದರು. ನಮ್ಮ ಪಕ್ಷಕ್ಕೆ ಪ್ರತಿಯೊಂದು ರೀತಿಯಲ್ಲಿಯೂ ಹಾನಿ ಮಾಡಿದ್ದರು. ಅವರು 'ಹಿಂದೂ' ಅಸ್ತ್ರ ಬಳಸಿಕೊಳ್ಳಲು ಕಾರಣವಿತ್ತು. ಆ ಕಾರಣ ಇಂದು ಬಹಿರಂಗವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ,ಜಾಖರ್ ತಮಗೆ ಸರಿಹೊಂದುವ ಪಕ್ಷವನ್ನು ಸೇರಿದ್ದಾರೆ ಎಂದು ಕುಟುಕಿರುವ ಅವರು, ಅಭಿನಂದನೆಯನ್ನೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.