ನವದೆಹಲಿ:ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆಮ್ಲಜನಕ, ಅಗತ್ಯ ಔಷಧಗಳು ಮತ್ತು ಲಸಿಕೆ ಪೂರೈಕೆಗೆ ಸಂಬಂಧಿಸಿದ ಸ್ವಯಂ ಪ್ರೇರಿತ ಪ್ರಕರಣದಲ್ಲಿ ತಮ್ಮನ್ನು ಅಮಿಕಸ್ ಕ್ಯೂರಿಯನ್ನಾಗಿ ಮಾಡುವುದು ಬೇಡ ಎಂಬ ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮಾನ್ಯ ಮಾಡಿದೆ.
ಆದರೆ ಗುರುವಾರ ಮಾಡಲಾದ ಈ ನೇಮಕಾತಿಗೆ ಇತರ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಬೇಸರ ವ್ಯಕ್ತಪಡಿಸಿದ್ದು, ಗುರುವಾರದ ತನ್ನ ಆದೇಶವನ್ನು ಸರಿಯಾಗಿ ಓದದೆಯೇ ಹಿರಿಯ ವಕೀಲರು ಹೇಳಿಕೆ ಕೊಡುತ್ತಿದ್ದಾರೆ, ದೇಶದಲ್ಲಿನ ಕೋವಿಡ್ ನಿರ್ವಹಣೆ ಕುರಿತಂತೆ ಹೈಕೋರ್ಟ್ ನಡೆಸುತ್ತಿರುವ ವಿಚಾರಣೆಗಳಿಗೆ ತಾನು ತಡೆ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿತು.
ಮುಖ್ಯ ನ್ಯಾಯಮೂರ್ತಿ ಬೊಬಡೆ ಅವರ ಕೊನೆಯ ಕರ್ತವ್ಯದ ದಿನದಂದೇ ಈ ಬೆಳವಣಿಗೆ ನಡೆದಿದೆ. ‘ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ನನಗೆ ಶಾಲಾ, ಕಾಲೇಜು ದಿನಗಳಿಂದಲೇ ತಿಳಿದಿದ್ದು, ಇದೇ ಸಲುಗೆ, ಸ್ನೇಹ ಈ ಪ್ರಕರಣದ ವಿಚಾರಣೆಯ ವೇಳೆ ಅಡ್ಡಿಯಾಗದಿರಲಿ ಎಂಬ ಕಾರಣಕ್ಕೆ ಅಮಿಕಸ್ ಕ್ಯೂರಿ ಸ್ಥಾನದಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದು ಹರೀಶ್ ಸಾಳ್ವೆ ಹೇಳಿದ್ದರು.
ಸಾಲಿಸಿಟರ್ ಜನರಲ್ ತುಷಾರ್ ಮಹ್ತಾ ಅವರು, ‘ಇಂಥ ಒತ್ತಡದ ತಂತ್ರಗಳಿಗೆ ಬಲಿಯಾಗಬೇಡಿ. ದಯವಿಟ್ಟು ಅಮಿಕಸ್ ಕ್ಯೂರಿ ನೇಮಕಾತಿಯಿಂದ ಹಿಂದೆ ಸರಿಯಬೇಡಿ‘ ಎಂದು ವಕೀಲ ಹರೀಶ್ ಸಾಳ್ವೆ ಅವರಿಗೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.