ಸಲ್ಮಾನ್ ರಶ್ದಿ ಮತ್ತು ‘ದಿ ಸಟಾನಿಕ್ ವರ್ಸಸ್’ ಕೃತಿ
ನವದೆಹಲಿ: ಲೇಖಕನ ಸಲ್ಮಾನ್ ರಶ್ದಿ ಅವರ ‘ದಿ ಸಟಾನಿಕ್ ವರ್ಸಸ್’ ಕೃತಿಗೆ ನಿಷೇಧ ಹೇರಲು ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಇಸ್ಲಾಂ ಅನ್ನು ಅವಹೇಳನ ಮಾಡಲಾಗಿದೆ ಎಂದು ಜಗತ್ತಿನಲ್ಲೆಡೆ ಮುಸ್ಲಿಂ ಸಂಘಟನೆಗಳು ಈ ಕೃತಿಗೆ ವಿರೋಧ ವ್ಯಕ್ತಪಡಿಸಿದ್ದವು. ಭಾರತದಲ್ಲೂ ಆಕ್ರೋಶ ವ್ಯಕ್ತವಾಗಿತ್ತು.
ರಾಜೀವ್ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ಈ ಪುಸ್ತಕಕ್ಕೆ ನಿಷೇಧ ಹೇರಲಾಗಿತ್ತು. ಅದಾಗಿ ಬರೋಬ್ಬರಿ 36 ವರ್ಷಗಳ ಬಳಿಕ ಈ ಕೃತಿ ಭಾರತವನ್ನು ಪ್ರವೇಶಿಸಿದೆ. ದೆಹಲಿಯ ಬಾರಿಸನ್ಸ್ ಪುಸ್ತಕ ಮಳಿಗೆಯಲ್ಲಿ ಈ ಕೃತಿ ಇತ್ತೀಚೆಗೆ ಮಾರಾಟವಾಗಿದ್ದು ಸುದ್ದಿಯಾಗಿತ್ತು. ಈ ಪುಸ್ತಕ ₹1,999ಕ್ಕೆ ಮಾರಾಟವಾಗಿದ್ದರ ಕುರಿತೂ ಹಲವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ರಾಜೀವ್ ಗಾಂಧಿ ಅವರ ಸರ್ಕಾರವು ಪುಸ್ತಕಕ್ಕೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಕಳೆದ ನವೆಂಬರ್ನಲ್ಲಿ ಮುಕ್ತಾಯ ಮಾಡಿತ್ತು.
‘ದಿ ಸಟಾನಿಕ್ ವರ್ಸಸ್’ ಕೃತಿಯಲ್ಲಿ ಇಸ್ಲಾಂ ಧರ್ಮಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿ 1989ರಲ್ಲಿ ಇರಾನ್ ಫತ್ವಾ ಹೊರಡಿಸಿತ್ತು.
ಹಾದಿ ಮಟರ್ ಎಂಬ ಆರೋಪಿ 2022ರ ಆಗಸ್ಟ್ನಲ್ಲಿ ರಶ್ದಿ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ. ಇದರಿಂದ ರಶ್ದಿ ಅವರು ಬಲಗಣ್ಣು ಮತ್ತು ಕೈಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.