ADVERTISEMENT

ಕುಲಾಂತರಿ ಸಾಸಿವೆ ತಡೆಗೆ ಮನವಿ: ಯಥಾಸ್ಥಿತಿಗೆ ಸುಪ್ರೀಂ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 19:31 IST
Last Updated 3 ನವೆಂಬರ್ 2022, 19:31 IST
   

ನವದೆಹಲಿ: ಕುಲಾಂತರಿ ಸಾಸಿವೆ ತಳಿ ಡಿಎಂಎಚ್‌–11 ಅನ್ನು ತೆರೆದ ಪರಿಸರ
ದಲ್ಲಿ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಶಿಫಾರಸು ಮಾಡಿದ್ದ ‘ಕುಲಾಂತರಿ ತಳಿ ಪರಿಶೀಲನಾ ಸಮಿತಿ –ಜಿಇಎಸಿ’ ನಿರ್ಧಾರಕ್ಕೆ ಸಂಬಂಧಿಸಿ, ಮುಂದಿನ ವಿಚಾರಣೆವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಮೌಖಿಕ ಸೂಚನೆ ನೀಡಿದೆ.

ಜಿಇಎಸಿಯ ಶಿಫಾರಸನ್ನು ಅನುಮೋದಿಸಿ ಕೇಂದ್ರ ಸರ್ಕಾರವು ಇದೇ ಅಕ್ಟೋಬರ್ ಕೊನೆಯ ವಾರದಲ್ಲಿ ಆದೇಶ ನೀಡಿತ್ತು. ಡಿಎಂಎಚ್‌–11 ಬಿಡುಗಡೆ ಮಾಡದಂತೆ 2016ರಲ್ಲಿ ಅರುಣಾ ರಾಡ್ರಿಗಸ್ ಅವರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದೆ. ಮೂಲ ಅರ್ಜಿಗೆ ಪೂರಕವಾಗಿ ಅರುಣಾ ಅವರು
ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಪೀಠವು ಈ ಆದೇಶ ನೀಡಿದೆ.

ಅದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ‘ಕುಲಾಂತರಿ ಸಾಸಿವೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2016 ಮತ್ತು 2017ರಲ್ಲಿ ಆದೇಶ ಹೊರಡಿಸಿತ್ತು. ಆ ಪ್ರಕಾರ, ಈ ಸಂಬಂಧ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ನ್ಯಾಯಾಲಯದ ಮುಂದೆ ಇರಿಸ
ಬೇಕಿತ್ತು. ಹಾಗೆ ಮಾಡದೇ ಇರುವ ಕಾರಣ, ಜಿಇಎಸಿಯ ನಿರ್ಧಾರವನ್ನು ರದ್ದುಪಡಿಸಬೇಕು’ ಎಂದು ಅವರು
ಪ್ರತಿಪಾದಿಸಿದರು.

ADVERTISEMENT

ಅರ್ಜಿಯ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.