ADVERTISEMENT

ಗೋವಾ: ರೈಲ್ವೆಯ ಜೋಡಿ ಮಾರ್ಗಕ್ಕೆ ‘ಸುಪ್ರೀಂ’ ಸಮಿತಿ ವಿರೋಧ

ಅನುಮತಿ ಹಿಂಪಡೆಯಲು ಶಿಫಾರಸು

ಪಿಟಿಐ
Published 27 ಏಪ್ರಿಲ್ 2021, 6:42 IST
Last Updated 27 ಏಪ್ರಿಲ್ 2021, 6:42 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ಪಣಜಿ: ‘ಪರಿಸರವಾದಿಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿರುವ ರೈಲ್ವೆಯ ಜೋಡಿ ಮಾರ್ಗ ಯೋಜನೆಯಲ್ಲಿ (ಡಬಲ್‌ ಟ್ರ್ಯಾಕ್‌ ಪ್ರಾಜೆಕ್ಟ್‌) ಸಮರ್ಥಿಸಿಕೊಳ್ಳುವಂತಹ ಯಾವುದೇ ಅಂಶಗಳಿಲ್ಲ’ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಉನ್ನತಾಧಿಕಾರ ಸಮಿತಿ ತಿಳಿಸಿದೆ.

ಈ ಕುರಿತು ಏಪ್ರಿಲ್ 23ರಂದು ಸಮಿತಿ ವರದಿಯನ್ನು ಬಿಡುಗಡೆ ಮಾಡಿದೆ. ‘ಈ ಯೋಜನೆ ಅನುಷ್ಠಾನವಾದರೆ ಪಶ್ಚಿಮ ಘಟ್ಟಗಳಲ್ಲಿರುವ ಸೂಕ್ಷ್ಮ ಪರಿಸರ ವ್ಯವಸ್ಥೆ ನಾಶವಾಗಲಿದೆ. ವಿಶ್ವಮಟ್ಟದಲ್ಲಿ ಪ್ರಮುಖ ಜೀವವೈವಿಧ್ಯ ತಾಣ ಎಂದೇ ಗುರುತಿಸಿಕೊಂಡಿರುವ ಹಾಗೂ ಹಲವು ವನ್ಯಜೀವಿಗಳ ಆವಾಸಸ್ಥಾನವಾಗಿರುವ ಪಶ್ಚಿಮ ಘಟ್ಟಕ್ಕೆ ಧಕ್ಕೆ ಉಂಟಾಗುತ್ತದೆ‘ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಪರಿಸರ ಸೂಕ್ಷ್ಮ ವಲಯದಲ್ಲಿ ಮತ್ತು ಅಪಾರ ಜೀವವೈವಿಧ್ಯ ಸಂಪತ್ತು ಹೊಂದಿರುವ, ಹುಲಿ ಅಭಯಾರಣ್ಯ, ಎರಡು ವನ್ಯಜೀವಿಧಾಮಗಳು ಹಾಗೂ ರಾಷ್ಟ್ರೀಯ ಉದ್ಯಾನದ ನಡುವೆ ಹಾದು ಹೋಗಲಿರುವ ಈ ಜೋಡಿ ಹಳಿ ಜಾಲದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾ ಗುವುದಿಲ್ಲ‘ ಎಂದು ಸಮಿತಿ ಪ್ರತಿಪಾದಿಸಿದೆ.

ADVERTISEMENT

‘ಈ ಸಂದರ್ಭದಲ್ಲಿ, ಪರಿಸರ ಸೂಕ್ಷ್ಮ ವಲಯವಾಗಿರುವ ಪಶ್ಚಿಮ ಘಟ್ಟಗಳಿಗೆ ತೊಂದರೆಯಾಗುವಂತಹ ಈ ಯೋಜನೆಗೆ ನೀಡಿದ ಅನುಮತಿಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್‌ಡಬ್ಲ್ಯುಬಿ) ಸ್ಥಾಯಿ ಸಮಿತಿ ಹಿಂತೆಗೆದುಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ’ ಎಂದು ವರದಿಯಲ್ಲಿ ಹೇಳಿದೆ.

ಪಶ್ಚಿಮ ಘಟ್ಟವಲಯದಲ್ಲಿ ಅನುಷ್ಠಾನವಾಗಲಿರುವ ನೈರುತ್ಯ ರೈಲ್ವೆ ವಿಭಾಗದ ಡಬಲ್ ಟ್ರ್ಯಾಕಿಂಗ್‌ ಯೋಜನೆ, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮತ್ತು ಜಿಟಿಟಿಪಿಎಲ್‌ ವಿದ್ಯುತ್‌ ಯೋಜನೆಯ ವಿರುದ್ಧ ಸ್ಥಳೀಯ ಪರಿಸರಾಸಕ್ತ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಇಂಥ ವಿರೋಧದ ನಡುವೆ ಎನ್‌ಬಿಡಬ್ಲ್ಯುಎಲ್‌ ಸ್ಥಾಯಿ ಸಮಿತಿ ಈ ಯೋಜನೆಗಳ ಅನುಷ್ಠಾನಕ್ಕೆ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.