
ಸುಪ್ರೀಂ ಕೋರ್ಟ್
ನವದೆಹಲಿ: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ಗಳ ಪ್ರವೇಶಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು. ಶೈಕ್ಷಣಿಕ ಕೋರ್ಸ್ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡ ನಂತರ ಅದರ ಮಾನದಂಡವನ್ನು ಬದಲಾಯಿಸುವಂತಿಲ್ಲ ಎಂದು ಹೇಳಿತು.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಅರಾಧೆ ಅವರ ನೇತೃತ್ವದ ನ್ಯಾಯಪೀಠವು, ‘ನೇಮಕಾತಿ ಪ್ರಕ್ರಿಯೆ ಆರಂಭಗೊಂಡ ನಂತರ ನಿಯಮಗಳ ಮಾರ್ಪಾಡು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅದೇ ರೀತಿ ಪ್ರವೇಶಾತಿ ಆರಂಭಗೊಂಡ ನಂತರ ಮಾನದಂಡಗಳ ತಿದ್ದುಪಡಿಯೂ ಅಕ್ರಮ’ ಎಂದು ತಿಳಿಸಿತು. ನ್ಯಾಯಸಮ್ಮತ ಪ್ರಕ್ರಿಯೆ ನಡೆಸಲು ಪಾರದರ್ಶಕತೆಯು ಬಹಳ ಮುಖ್ಯ ಎಂದು ಹೇಳಿತು.
‘ಪಾರದರ್ಶಕತೆಯ ಕೊರತೆಯು ಸ್ವೇಚ್ಚಾಚಾರ ಮತ್ತು ಸ್ವಜನಪಕ್ಷಪಾತಕ್ಕೆ ಹಿಂಬಾಗಿಲ ಮೂಲಕ ದಾರಿ ಮಾಡಿಕೊಡುತ್ತದೆ. ಸಮಾನತಾವಾದದ ಮೂಲಕ ಇಂಥ ಪರಿಸ್ಥಿತಿಯನ್ನು ತೊಲಗಿಸಬೇಕು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪಂಜಾಬ್ ಸರ್ಕಾರವು 2024ನೇ ಸಾಲಿನ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ಗಳ ಪ್ರವೇಶಾತಿಗೆ ಅಳವಡಿಸಿಕೊಂಡಿದ್ದ ಮಾನದಂಡವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠವು ವಿಚಾರಣೆ ನಡೆಸಿತು.
ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ವರ್ತಿಸಬೇಕಾದುದು ರಾಜ್ಯ ಮತ್ತು ಅದರ ಅಂಗ ಸಂಸ್ಥೆಗಳ ಕರ್ತವ್ಯ ಮತ್ತು ಜವಾಬ್ದಾರಿ. ರಾಜ್ಯ ಕೈಗೊಳ್ಳುವ ಯಾವುದೇ ನಿರ್ಧಾರವು ವಿವೇಕಯುತವಾಗಿರಬೇಕು ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.