ADVERTISEMENT

ಹಂಪಿ ವಿರುಪಾಪುರಗಡ್ಡೆ ಅನಧಿಕೃತ ಕಟ್ಟಡ ನೆಲಸಮಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

ಏಜೆನ್ಸೀಸ್
Published 12 ಫೆಬ್ರುವರಿ 2020, 7:16 IST
Last Updated 12 ಫೆಬ್ರುವರಿ 2020, 7:16 IST
ವಿರುಪಾಪುರ ಗಡ್ಡೆಯಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಸಿಗರ ಭೇಟಿ ಅವಕಾಶ ಕಲ್ಪಿಸಿರುವುದು.
ವಿರುಪಾಪುರ ಗಡ್ಡೆಯಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಸಿಗರ ಭೇಟಿ ಅವಕಾಶ ಕಲ್ಪಿಸಿರುವುದು.   

ನವದೆಹಲಿ: ಹಂಪಿಯ ವಿರುಪಾಪುರಗಡ್ಡೆಯಲ್ಲಿ ಅನಧಿಕೃತವಾಗಿ ತಲೆಎತ್ತಿರುವ ಹೋಟೆಲ್, ರೆಸ್ಟೊರೆಂಟ್‌‌ ಸೇರಿದಂತೆ ಇತರೆ ಕಟ್ಟಡಗಳನ್ನು ಒಂದು ತಿಂಗಳ ಒಳಗೆ ನೆಲಸಮ ಮಾಡಬೇಕೆಂದು ಸುಪ್ರೀಂಕೋರ್ಟ್ ರಾಜ್ಯಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮಂಗಳವಾರ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಹಾಗೂ ಆರ್.ಸುಭಾಷ್ ರೆಡ್ಡಿ ಅವರಿದ್ದ ದ್ವಿಸದಸ್ಯ ಪೀಠ ಈ ನಿರ್ದೇಶನ ನೀಡಿ, ಹಂಪಿಯ ಪಶ್ಚಿಮ ದಿಕ್ಕಿನಲ್ಲಿ ತುಂಗಭದ್ರಾ ನದಿಗೆ ವೃತ್ತಾಕಾರದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಇವುಗಳನ್ನು ತೆರವು ಮಾಡಬೇಕೆಂದು ತಿಳಿಸಿದೆ.

2009ರಲ್ಲಿಯೇ ಯುನೆಸ್ಕೋ ಸಭೆ ನಡೆಸಿ ಐತಿಹಾಸಿಕ ಸ್ಥಳವಾದ ವಿಜಯನಗರಕ್ಕೆ ಅನಧಿಕೃತ ಕಟ್ಟಡಗಳಿಂದಅಪಾಯವಿದೆ ಎಂಬುದನ್ನು ಒತ್ತಿ ಹೇಳಿತ್ತು. ಈ ಸಂಬಂಧ 1988ರ ಅಕ್ಟೋಬರ್ 22ರಂದು ನೋಟಿಫಿಕೇಷನ್ ಒಂದನ್ನು ಹೊರಡಿಸಲಾಗಿದ್ದು, ಉಳುಮೆ ಮಾಡುವುದನ್ನು ಹೊರತುಪಡಿಸಿ ಉಳಿದ ಯಾವುದೇ ಚಟುವಟಿಕೆಗಳು ಈ ಭಾಗದಲ್ಲಿ ನಡೆಯಕೂಡದು ಎಂದು ಹೇಳಿದ್ದು, ಈ ಪ್ರದೇಶವನ್ನು ರಕ್ಷಿಸಬೇಕೆಂದು ಹೇಳಲಾಗಿದೆ ಎಂದರು.

ADVERTISEMENT

ವಿರುಪಾಪುರ ಗಡ್ಡೆ ಸುತ್ತಲೂ ನದಿ ನೀರನ್ನು ಹೊಂದಿರುವ ದ್ವೀಪ. ಇಲ್ಲಿಅಭಿವೃದ್ಧಿ ಹೆಸರಲ್ಲಿ ಸಿದ್ದಪಡಿಸಲಾಗಿರುವ 2021ರ ಮಾಸ್ಟರ್ ಪ್ಲಾನ್ ಪ್ರಕಾರವೂ ಯಾವುದೇ ಚಟುವಟಿಕೆ ನಡೆಯಲು ಅವಕಾಶ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಸಂಬಂಧ ಸಕ್ಕುಬಾಯಿ ಎಂಬುವರೂ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು, ಈ ಸಂಬಂಧ ರಾಜ್ಯ ಹೈಕೋರ್ಟ್ಐತಿಹಾಸಿಕ ಹಂಪಿಯಲ್ಲಿ ಅನಧಿಕೃತ ಕಟ್ಟಡಗಳ ನೆಲಸಮ ಮಾಡಲು ಅವಕಾಶ ನೀಡಿದ್ದ ಏಪ್ರಿಲ್ 27ರ, 2015ರ ತೀರ್ಪನ್ನು ಎತ್ತಿಹಿಡಿದಿದೆ.

ಸಕ್ಕೂಬಾಯಿ ಸೇರಿದಂತೆ ಹಲವು ತಮ್ಮ ಜಮೀನಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರ್ಮಿಸಿದ್ದ ರೆಸ್ಟೊರೆಂಟ್, ವಸತಿಗೃಹಗಳ ಕಟ್ಟಡಗಳನ್ನು ಸಕ್ರಮ ಎಂದು ಘೋಷಿಸುವಂತೆ ಕೋರಿದ್ದರು.

ಇಲ್ಲಿ ಅಕ್ರಮ ಕಟ್ಟಡ ನಿರ್ಮಿಸುವುದುಮೈಸೂರು ಪ್ರಾಚೀನ ಮತ್ತು ಐತಿಹಾಸಿಕ ಸ್ಥಳಗಳ ಕಾಯ್ದೆ 1961ರ ಸೆಕ್ಷನ್ 20(1)ರ ಉಲ್ಲಂಘನೆಯಾಗಿದೆ, ಇಲ್ಲಿ ಅನಧಿಕೃತ ಚಟುವಟಿಕೆಗಳು ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.