ನವದೆಹಲಿ:ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ಚುರುಕುಗೊಳಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದರು. ರೈಲ್ವೆ ಮಂಡಳಿ ಅಧಿಕಾರಿಗಳ ಜೊತೆಗೆ ಕರ್ನಾಟಕದ ಬಾಕಿ ಯೋಜನೆಗಳನ್ನು ಕುರಿತು ಅವರು ಚರ್ಚಿಸಿದರು.
ರಾಜ್ಯ ಸರ್ಕಾರದ ಜೊತೆಗೆ ಚರ್ಚಿಸಿ ಬಾಕಿ ಉಳಿದಿರುವ ಅನುಮೋದನೆಯನ್ನು ಶೀಘ್ರ ಪಡೆಯಲು ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.
ವರ್ಷಾರಂಭದಲ್ಲಿ ರೈಲ್ವೆ ಸಚಿವರಾಗಿದ್ದ ಪೀಯೂಶ್ ಗೋಯಲ್ ಅವರು ಬೆಂಗಳೂರಿಗೆ ಭೇಟಿ ನೀಡಿ ಯೋಜನೆಗೆ ಚಾಲನೆ ನೀಡಲು ಒಪ್ಪಿದ್ದರು.
ಆದರೆ, ಪ್ರಧಾನಮಂತ್ರಿಗಳ ಕಚೇರಿಯು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (ಕೆ–ರೈಡ್) ಯೋಜನೆಯ ಸಮಗ್ರ ವರದಿಯನ್ನು ಪರಿಷ್ಕರಿಸಲು ಒತ್ತು ನೀಡಿತ್ತು. ನಿಲ್ದಾಣಗಳ ಸಂಖ್ಯೆ ಕುಗ್ಗಿಸುವುದಲ್ಲದೆ ನಮ್ಮ ಮೆಟ್ರೊ ಜಾಲದ ಜೊತೆಗೆ ಸಂಪರ್ಕಕ್ಕೆ ಬಾರದ ರೀತಿಯಲ್ಲಿ ವರದಿ ಪರಿಷ್ಕರಿಸಬೇಕು ಎಂದು ಕೇಂದ್ರ ಸೂಚನೆ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.