ADVERTISEMENT

ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರಚಿಕಿತ್ಸೆಗೆ ತರಬೇತಿ: ಕೇಂದ್ರ

ಪಿಟಿಐ
Published 2 ಫೆಬ್ರುವರಿ 2021, 16:07 IST
Last Updated 2 ಫೆಬ್ರುವರಿ 2021, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ‘ಭಾರತೀಯ ಔಷಧ ಕೇಂದ್ರ ಮಂಡಳಿ (ಆಯುರ್ವೇದ ಸ್ನಾತಕೋತ್ತರ ಶಿಕ್ಷಣ) ತಿದ್ದುಪಡಿ’ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ 58 ಶಸ್ತ್ರಚಿಕಿತ್ಸೆಯ ತರಬೇತಿ ನೀಡುವ ಅವಶ್ಯಕತೆ ಇದೆ. ಕೋರ್ಸ್‌ ಪೂರೈಸಿದ ಬಳಿಕ ಅವರು ವೈಯಕ್ತಿಕವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಮರ್ಥರಾಗಿರಬೇಕಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.

ಅಧಿಸೂಚನೆಯು ನಿರ್ದಿಷ್ಟ ಶಸ್ತ್ರಚಿಕಿತ್ಸಾ ಕ್ರಮಗಳಿಗೆ ಸೀಮಿತವಾಗಿದ್ದು, ಇತರ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಅನುಮತಿ ನೀಡಿಲ್ಲ ಎಂದು ಆಯುಷ್ ಖಾತೆಯ ಹೆಚ್ಚುವರಿ ಹೊಣೆ ವಹಿಸಿರುವ ಸಚಿವ ಕಿರಣ್ ರಿಜಿಜು ರಾಜ್ಯಸಭೆಗೆ ತಿಳಿಸಿದ್ದಾರೆ.

‘ಭಾರತೀಯ ಔಷಧ ಕೇಂದ್ರ ಮಂಡಳಿ (ಆಯುರ್ವೇದ ಸ್ನಾತಕೋತ್ತರ ಶಿಕ್ಷಣ) ತಿದ್ದುಪಡಿ’ ಅಧಿಸೂಚನೆ ಅಡಿಯಲ್ಲಿ ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಲಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

ನಿರ್ದಿಷ್ಟ ಶಸ್ತ್ರಚಿಕಿತ್ಸಾ ವಿಧಾನಗಳು ಸಂಬಂಧಪಟ್ಟ ರೋಗಿಯ ಆರೋಗ್ಯ, ಸುರಕ್ಷತೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ಖಚಿತಪಡಿಸುತ್ತದೆಯೇ ಎಂಬುದರ ಕುರಿತು ಕಾಳಜಿ ವಹಿಸಬೇಕಿದೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿ ಸಚಿವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ನಿರ್ದಿಷ್ಟ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸಲು ಆಯುರ್ವೇದ ಸ್ನಾತಕೋತ್ತರ ಪದವೀಧರರು ಉತ್ತಮ ತರಬೇತಿ ಪಡೆದಿದ್ದಾರೆ ಎಂದು ಸಚಿವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.