ADVERTISEMENT

ಕೇರಳ: ಇಬ್ಬರು ಮಹಿಳೆಯರ ಹತ್ಯೆ, ನರಬಲಿ ಶಂಕೆ

ದಂಪತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದ ಪೊಲೀಸರು

ಪಿಟಿಐ
Published 11 ಅಕ್ಟೋಬರ್ 2022, 11:18 IST
Last Updated 11 ಅಕ್ಟೋಬರ್ 2022, 11:18 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಕೊಚ್ಚಿ: ಕೇರಳದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಮಹಿಳೆಯರ ಹತ್ಯೆಯ ಹಿಂದೆ ನರಬಲಿಯ ಶಂಕೆ ವ್ಯಕ್ತವಾಗಿದ್ದು,ಈ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ತಮ್ಮ ಹಣಕಾಸಿನ ಸಮಸ್ಯೆ ನೀಗಿ, ಸಮೃದ್ಧಿ ದಕ್ಕುತ್ತದೆಎಂಬ ಕಾರಣಕ್ಕಾಗಿ ಆರೋಪಿಗಳು ಬೀದಿಬದಿಯಲ್ಲಿ ಲಾಟರಿ ಟಿಕೆಟ್ ಮಾರಿ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ’ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ತಿಳಿಸಿದ್ದಾರೆ.

‘ಆರೋಪಿಗಳು ಇಬ್ಬರು ಮಹಿಳೆಯರ ಗಂಟಲು ಸೀಳಿ ಹತ್ಯೆ ಮಾಡಿದ್ದು, ಅವರ ದೇಹದ ವಿವಿಧ ಭಾಗಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ, ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾ ಎನ್ನುವ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಹೂಳಿದ್ದಾರೆ. ಸುಮಾರು 50 ವರ್ಷ ವಯಸ್ಸಿನವರಾದ ಈ ಮಹಿಳೆಯರುಕಡವಂತಾರ ಮತ್ತು ಕಾಲಡಿ ಗ್ರಾಮದ ನಿವಾಸಿಗಳು’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಈ ವರ್ಷದ ಜೂನ್ ಮತ್ತು ಸೆಪ್ಟೆಂಬರ್‌ ತಿಂಗಳಿನಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದರು. ಪೊಲೀಸರು ತನಿಖೆ ನಡೆಸಿದಾಗ ನರಬಲಿಯ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬಂಧಿತರನ್ನು ತಿರುವಲ್ಲಾದ ನಿವಾಸಿ ಮಸಾಜ್ ಥೆರಪಿಸ್ಟ್ ಭಗವತ್ ಸಿಂಗ್, ಆತನ ಪತ್ನಿ ಲೈಲಾ ಹಾಗೂ ಪೆರುಂಬವೂರು ಮೂಲದ ರಶೀದ್ ಅಲಿಯಾಸ್ ಮಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ. ಮಹಮ್ಮದ್ ಇಬ್ಬರು ಮಹಿಳೆಯರನ್ನು ದಂಪತಿಯ ಮನೆಗೆ ಕರೆತಂದಿದ್ದ ಎನ್ನಲಾಗಿದೆ.

‘ಮಾಟಮಂತ್ರ ಹಾಗೂ ಆರ್ಥಿಕ ಲಾಭಕ್ಕಾಗಿ ನರಬಲಿ ನೀಡಿದ ಪ್ರಕರಣ ಎಂಬುದುಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ವಿಚಾರಣೆ, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಬಹುದು’ ಎಂದು ದಕ್ಷಿಣ ವಲಯದ ಐಜಿಪಿ ಪಿ. ಪ್ರಕಾಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.