ಭೋಪಾಲ್: ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಮತಯಂತ್ರವನ್ನಿರಿಸಿರುವ ಭದ್ರತಾಕೊಠಡಿಯ ಗೋಡೆಗೆ ಎಸ್ಯುವಿ ಕಾರೊಂದು ಡಿಕ್ಕಿ ಹೊಡೆಸಿರುವಘಟನೆ ಭಾನುವಾರ ರಾತ್ರಿ ನಡೆದಿದೆ.ಕಾರು ಡಿಕ್ಕಿಯಾಗಿರುವಗೋಡೆ ಭಾಗಶಃ ಹಾನಿಯಾಗಿದೆ.
ನವೆಂಬರ್ 30ರಂದು ಕೂಡಾ ಇದೇ ರೀತಿ ಮತಯಂತ್ರವನ್ನಿಟ್ಟಿದ್ದ ಕೊಠಡಿಯ ಗೋಡೆ ಹಾನಿಯಾಗಿತ್ತು.
ಮತಯಂತ್ರವನ್ನು ದುರ್ಬಳಕೆ ಮಾಡುವ ಹುನ್ನಾರ ಇದು ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಇಲ್ಲಿ ಪ್ರತಿಭಟನೆ ನಡೆಸಿದ್ದಾರೆ
ಗೋಡೆಗೆ ಡಿಕ್ಕಿ ಹೊಡೆದಿದ್ದವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಾಹನದಲ್ಲಿದ್ದ ಆರು ಮಂದಿ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಮತಯಂತ್ರವನ್ನಿರಿಸಿದ ಕೊಠಡಿಗೆ ಪ್ರವೇಶಿಸುವುದಕ್ಕಾಗಿ 6 ಮಂದಿ ಯುವಕರು ಎಸ್ಯುವಿ ಕಾರನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದರು ಎಂದು ಮೂಲಗಳು ಹೇಳಿವೆ.
ವಾಹನ ನೋಂದಣಿ ಸಂಖ್ಯೆ MP19 CB0505 ಹೊಂದಿರುವ ಕಪ್ಪು ಬಣ್ಣದ ಸ್ಕಾರ್ಪಿಯೊ ಕಾರನ್ನು ರಾತ್ರಿಯೇ ವಶ ಪಡಿಸಿದ್ದು, ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಪ್ರಮೋದ್ ಯಾದವ್ ಮತ್ತು ರುದ್ರ ಕುಶ್ವಾಹ ಎಂದು ಗುರುತಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಾರಿನಲ್ಲಿದ್ದ ಶೈಲೇಶ್ ಕುಶ್ವಾಹ, ಸನು ಕುಶ್ವಾಹ, ಪ್ರಿನ್ಸ್ ಅಲಿಯಾಸ್ ಸತ್ಯವೃತ್ ಸಿಂಗ್ ಮತ್ತು ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸ್ ಬಲೆ ಬೀಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.