ADVERTISEMENT

ಕುಡಿಯುವ ನೀರು ಶುದ್ಧವಲ್ಲ: ಬಿಐಎಸ್‌ ಅಧ್ಯಯನ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 22:15 IST
Last Updated 16 ನವೆಂಬರ್ 2019, 22:15 IST
ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರು ನೀರಿನ ಗುಣಮಟ್ಟ ಕುರಿತ ವರದಿಯ ವಿವರಗಳನ್ನು ನೀಡಿದರು
ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರು ನೀರಿನ ಗುಣಮಟ್ಟ ಕುರಿತ ವರದಿಯ ವಿವರಗಳನ್ನು ನೀಡಿದರು   

ನವದೆಹಲಿ: ನಲ್ಲಿಯ ನೀರನ್ನು ನೇರವಾಗಿ ಕುಡಿಯುವ ಮುನ್ನ ಎರಡು ಬಾರಿ ಯೋಚಿಸಬೇಕಾಗಿದೆ.ಬೆಂಗಳೂರು ಸೇರಿದಂತೆ 13 ರಾಜ್ಯಗಳ ರಾಜಧಾನಿಗಳಲ್ಲಿ ಪೈಪ್‌ ಮೂಲಕ ಮನೆಗಳಿಗೆ ಸರಬರಾಜು ಮಾಡಲಾಗುತ್ತಿರುವ ನೀರು ಕುಡಿಯಲು ಯೋಗ್ಯವಾದ ಮಟ್ಟ ಕಾಯ್ದುಕೊಂಡಿಲ್ಲ ಎಂದು ಭಾರತೀಯ ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್‌) ನಡೆಸಿದ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರು ಅಧ್ಯಯನದ ವರದಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಸಂಗ್ರಹಿಸಲಾದ 10 ಮಾದರಿಗಳ ಪೈಕಿ ಐದು ಮಾದರಿಗಳು ವಿಫಲವಾಗಿವೆ. ನೀರಿನೊಳಗೆ ಕಲ್ಮಶ, ಸೂಕ್ಷ್ಮ ರೋಗಾಣು, ಅಲ್ಯೂಮಿನಿಯಂ, ಕ್ಯಾಲ್ಷಿಯಂ ಹಾಗೂ ಬ್ರೊಮೊ ಟ್ರೈಕ್ಲೊರೊಮಿಥೇನ್ ಮಾನದಂಡ ಪರೀಕ್ಷೆಯಲ್ಲಿ ಅಗತ್ಯ ಗುಣಮಟ್ಟ ಇಲ್ಲದಿರುವುದು ಬೆಳಕಿಗೆ ಬಂದಿದೆ.

ADVERTISEMENT

ಸಂಸ್ಥೆಯು ದೇಶದ ಪ್ರಮುಖ ನಗರಗಳ ಬೇರೆಬೇರೆ ಪ್ರದೇಶಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ, 11 ರೀತಿಯ ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದೆ. ಇದರಲ್ಲಿ ಮುಂಬೈ ನಗರದಲ್ಲಿ ಸಂಗ್ರಹಿಸಿದ್ದ ಎಲ್ಲಾ ಮಾದರಿಗಳು ನಿಗದಿತ ಎಲ್ಲಾ 11 ಗುಣಮಟ್ಟ ಮಾನದಂಡಗಳನ್ನು ಕಾಯ್ದುಕೊಂಡಿದ್ದವು. ಚೆನ್ನೈ, ಕೋಲ್ಕತ್ತ ಹಾಗೂ ದೆಹಲಿಯಿಂದ ಸಂಗ್ರಹಿಸಿದ ಮಾದರಿಗಳು 11 ರಲ್ಲಿ ಹತ್ತು ಗುಣಮಟ್ಟ ಮಾನದಂಡಗಳನ್ನು ಕಾಯ್ದುಕೊಳ್ಳಲು ವಿಫಲವಾಗಿವೆ.

‘ನೀರಿನಲ್ಲಿರುವ ರಾಸಾಯನಿಕ ಮತ್ತು ವಿಷಕಾರಿ ಅಂಶಗಳು ದೇಹದ ಮೇಲೆ ಹೇಗೆ ಪರಿಣಾಮ ಉಂಟುಮಾಡಬಲ್ಲವು ಎಂಬುದನ್ನು ತಿಳಿಯುವುದು ಅಧ್ಯಯನದ ಉದ್ದೇಶವಾಗಿತ್ತು’ ಎಂದು ಸಂಸ್ಥೆ ಹೇಳಿದೆ.

ವರದಿಯ ಅಂಶಗಳು

* ದೆಹಲಿಯಲ್ಲಿ ಸರಬರಾಜು ಮಾಡುತ್ತಿರುವ ನೀರು ಕುಡಿಯಲು ಸುರಕ್ಷಿತವಾಗಿಲ್ಲ

* ಹೈದರಾಬಾದ್‌ ಸೇರಿ ಆರು ರಾಜಧಾನಿಗಳಿಂದ ಸಂಗ್ರಹಿಸಲಾಗಿದ್ದ ಎಲ್ಲಾ ಮಾದರಿಗಳೂ ಒಂದಲ್ಲ ಒಂದು ಗುಣಮಟ್ಟ ಮಾನದಂಡ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ.

* ಚೆನ್ನೈನಲ್ಲಿ ಸಂಗ್ರಹಿಸಿದ ಎಲ್ಲಾ ಮಾದರಿಗಳು 11ರಲ್ಲಿ 9 ಗುಣಮಟ್ಟ ಮಾನದಂಡಗಳನ್ನು ಕಾಪಾಡುವಲ್ಲಿ ವಿಫಲವಾಗಿವೆ

* ದೆಹಲಿಯಲ್ಲಿ ಸರಬರಾಜು ಮಾಡುತ್ತಿರುವ ನೀರು ಕುಡಿಯಲು ಸುರಕ್ಷಿತವಾಗಿಲ್ಲ

* ಹೈದರಾಬಾದ್‌ ಸೇರಿ ಆರು ರಾಜಧಾನಿಗಳಿಂದ ಸಂಗ್ರಹಿಸಲಾಗಿದ್ದ ಎಲ್ಲಾ ಮಾದರಿಗಳೂ ಒಂದಲ್ಲ ಒಂದು ಗುಣಮಟ್ಟ ಮಾನದಂಡ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ.

* ಚೆನ್ನೈನಲ್ಲಿ ಸಂಗ್ರಹಿಸಿದ ಎಲ್ಲಾ ಮಾದರಿಗಳು 11ರಲ್ಲಿ 9 ಗುಣಮಟ್ಟ ಮಾನದಂಡಗಳನ್ನು ಕಾಪಾಡುವಲ್ಲಿ ವಿಫಲವಾಗಿವೆ.

*
ಪೈಪ್‌ ಮೂಲಕ ಸರಬರಾಜು ಮಾಡುವ ನೀರಿನ ಗುಣಮಟ್ಟ ಕಾಪಾಡುವುದು ಈಗಿನ ನಿಯಮದ ಪ್ರಕಾರ ಕಡ್ಡಾಯವಲ್ಲ. ಯಾರ ವಿರುದ್ಧವೂ ಕ್ರಮ ಸಾಧ್ಯವಿಲ್ಲ.
-ರಾಮ್‌ವಿಲಾಸ್‌ ಪಾಸ್ವಾನ್‌, ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.