ಕೊಚ್ಚಿ: ಕೇರಳದ ಕರಾವಳಿ ಭಾಗದಿಂದ ತೌಕ್ತೆ ಚಂಡಮಾರುತವು ದೂರ ಸರಿದಿದೆ. ಆದರೂ ರಾಜ್ಯದ ಹಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಹೆಚ್ಚಿದೆ.
ಎರ್ನಾಕುಳಂ, ಇಡುಕ್ಕಿ ಮತ್ತು ಮಲಪ್ಪುರಂನಲ್ಲಿ ಭಾರಿ ಅಥವಾ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಈ ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
‘ಮಧ್ಯ ಕೇರಳದ ಜಿಲ್ಲೆಗಳ ಹಲವು ಅಣೆಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಪೆರಿಂಗಲ್ಕುತ್ತು ಅಣೆಕಟ್ಟಿನ ನೀರಿನ ಮಟ್ಟವು 419.41 ಮೀಟರ್ ಅನ್ನು ಮೀರಿದರೆ, ಅದರ ಗೇಟುಗಳನ್ನು ತೆರೆಯಲಾಗುವುದು’ ಎಂದು ತ್ರಿಶ್ಶೂರ್ ಜಿಲ್ಲಾಡಳಿತ ತಿಳಿಸಿದೆ.
ಇದನ್ನೂ ಓದಿ– ಮುರ್ಡೇಶ್ವರ: ವ್ಯಾಪಾರಿಗಳ ಬದುಕು ಕಸಿದ ಚಂಡಮಾರುತ
‘ಮಲಂಕಾರ ಮತ್ತು ಇಡುಕ್ಕಿ ಜಿಲ್ಲೆಯ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾದ್ದರಿಂದ ಅದರ ಗೇಟುಗಳನ್ನು ಭಾನುವಾರ ತೆರೆಯಲಾಗುವುದು. ತೊಡುಪುಳ, ಮುವಾಟ್ಟುಪುಳ ನದಿ ಮತ್ತು ಅದರ ಉಪನದಿಗಳ ಬಳಿ ವಾಸವಾಗಿರುವವರು ಜಾಗೂರುಕರಾಗಿರುವಂತೆ’ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
‘ಕರಾವಳಿ ತೀರದಲ್ಲಿ ವಾಸಿಸುವ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.