ನವದೆಹಲಿ: ಟ್ಯಾಕ್ಸಿ ಚಾಲಕರನ್ನು ಕೊಂದು, ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ 49 ವರ್ಷದ ಆರೋಪಿಯನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು, ಚಾಲಕರನ್ನು ಕೊಂದು ಅವರ ಶವಗಳನ್ನು ಉತ್ತರಾಖಂಡದ ಅರಣ್ಯ ಪ್ರದೇಶಗಳಲ್ಲಿ ಎಸೆದು, ವಾಹನಗಳನ್ನು ನೇಪಾಳ ಗಡಿಯಲ್ಲಿ ಮಾರಾಟ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರೋಪಿ ಅಜಯ್ ಲಂಬಾ ಅಲಿಯಾಸ್ ಬನ್ಶಿ ದೆಹಲಿ ಮತ್ತು ಉತ್ತರಾಖಂಡದಾದ್ಯಂತ ನಾಲ್ಕು ಭೀಕರ ದರೋಡೆ ಮತ್ತು ಕೊಲೆ ಪ್ರಕರಣಗಳಲ್ಲಿ ಮತ್ತು 2001ರಲ್ಲಿ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಸೇರಿದಂತೆ ಎಲ್ಲಾ ಪ್ರಕರಣಗಳಲ್ಲಿ ಆರೋಪಿಯನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1999 ಮತ್ತು 2001ರ ನಡುವೆ ನಡೆದ ಹಲವಾರು ಅಪರಾಧಗಳ ಹಿಂದಿನ ಪ್ರಮುಖ ಆರೋಪಿಯಾಗಿದ್ದ ಲಂಬಾ, ತನ್ನ ಗುರುತು ಮತ್ತು ಸ್ಥಳವನ್ನು ಆಗಾಗ್ಗೆ ಬದಲಾಯಿಸುತ್ತಿದ್ದನು. ಹೀಗಾಗಿ ಆತನನ್ನು ಬಂಧಿಸಲಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
2008ರಿಂದ 2018ರವರೆಗೆ ಲಂಬಾ ತನ್ನ ಕುಟುಂಬದೊಂದಿಗೆ ನೇಪಾಳದಲ್ಲಿ ವಾಸಿಸುತ್ತಿದ್ದನು. ನಂತರ ಡೆಹ್ರಾಡೂನ್ಗೆ ತೆರಳಿದರು. 2020ರಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡನು. ಒಡಿಶಾದಿಂದ ದೆಹಲಿ ಮತ್ತು ಭಾರತದ ಇತರ ಭಾಗಗಳಿಗೆ ಗಾಂಜಾ ಪೂರೈಕೆ ಜಾಲದಲ್ಲಿ ಕೆಲಸ ಮಾಡುತ್ತಿದ್ದನು. ಲಂಬಾನನ್ನು ದೆಹಲಿಯಲ್ಲಿ ಬಂಧಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ) ಆದಿತ್ಯ ಗೌತಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.