ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು ಶಿಮ್ಲಾ ನಗರ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿಯು ಟೀ ಮಾರುವ ವ್ಯಕ್ತಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ.
ವೃತ್ತಿಯಲ್ಲಿ ಟೀ ಅಂಗಡಿ ಸ್ಟಾಲ್ ನಡೆಸುತ್ತಿರುವ ಸಂಜಯ್ ಸೂದ್ ಶಿಮ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಅವರು ಎರಡು ಸಲಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಚಿವ ಸುರೇಶ್ ಭಾರಾದ್ವಜ್ ಅವರಿಗೆ ಬೇರೆ ಕ್ಷೇತ್ರವನ್ನು ನೀಡಲಾಗಿದೆ.
ಆರ್ಎಸ್ಎಸ್ ಹಿನ್ನೆಲೆ ಹೊಂದಿರುವ ಸಂಜಯ್ ಸೂದ್ 1970ರಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ನೀಡಿರುವುದು ಸಂತಸದ ವಿಚಾರವಾಗಿದೆ. ಸುರೇಶ್ ಅವರಿಗೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕೊಡಲಾಗಿದೆ. ಅವರು ಅಲ್ಲಿಯೂ ಗೆಲ್ಲಲಿದ್ದಾರೆ, ಹಾಗೇ ನನ್ನ ಗೆಲುವಿಗೂ ಸಹಾಯ ಮಾಡಲಿದ್ದಾರೆ ಎಂದು ಸಂಜಯ್ ಹೇಳಿದ್ದಾರೆ.
ನವೆಂಬರ್ 12ರಂದು 68 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25ರಂದು ಕಡೆಯ ದಿನ. 27ರಂದು ನಾಮಪತ್ರಗಳ ಪರಿಶೀಲನೆ. 29ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.