ಬೆಂಗಳೂರು: ‘ಬೆಂಗಳೂರು ಭಯೋತ್ಪಾದಕರ ಕೇಂದ್ರವಾಗಿದೆ’ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಬಿಜೆಪಿಗರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ಅವಮಾನ ಆಗಿದೆ ಎಂದು ಕಿಡಿಕಾರಿದೆ. ತೇಜಸ್ವಿ ಸೂರ್ಯ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ತೇಜಸ್ವಿ ಸೂರ್ಯ ಅಲ್ಲ; ಅಮಾವಾಸ್ಯೆ . ಆತನನ್ನು ಬಿಜೆಪಿ ವಜಾಗೊಳಿಸಬೇಕು’ ಎಂದು ಹರಿಹಾಯ್ದಿದ್ದಾರೆ.
‘ಈ ಹಿಂದೆ ನರೇಂದ್ರ ಮೋದಿಯವರು ಬೆಂಗಳೂರನ್ನು ಸಿನ್ ಸಿಟಿ, ಗಾರ್ಬೇಜ್ ಸಿಟಿ ಎಂದು ಅವಮಾನಿಸಿದ್ದರು. ಈಗ ತೇಜಸ್ವಿ ಸೂರ್ಯ ಎಂಬ ‘ಎಳಸು’ ಬೆಂಗಳೂರು ಭಯೋತ್ಪಾದಕರ ಕೇಂದ್ರವಾಗಿದೆ ಎಂದಿರುವುದು ತೀರ ಅಕ್ಷಮ್ಯ’ ಎಂದು ಕಾಂಗ್ರೆಸ್ ಟ್ಟೀಟ್ ಮಾಡಿದೆ.
'ಬಿ.ಎಸ್. ಯಡಿಯೂರಪ್ಪ ಅವರೇ, ನಿಮ್ಮ ಅಪಕ್ವ ಆಡಳಿತದಲ್ಲಿ ಕರ್ನಾಟಕದ ಉದ್ಯಮ ಸ್ನೇಹಿ ಶ್ರೇಯಾಂಕ ಗಣನೀಯ ಕುಸಿತ ಕಂಡಿದೆ. ಈಗ ತೇಜಸ್ವಿ ಸೂರ್ಯ ಹೇಳಿಕೆಯಿಂದ ಬಂಡವಾಳ ಹೂಡಿಕೆಯಲ್ಲಿ ಇನ್ನಷ್ಟು ಹಿನ್ನೆಡೆಯಾಗಲಿದೆ" ಎಂದಿರುವ ಕಾಂಗ್ರೆಸ್, 'ಬುದ್ಧಿವಾದ ಹೇಳುತ್ತೀರೋ. ಅಥವಾ ನಿಮ್ಮ ಆಡಳಿತದ ಕಾನೂನು ಸುವ್ಯವಸ್ಥೆಯ ವೈಫಲ್ಯವೆಂದು ಒಪ್ಪಿಕೊಂಡು ಸುಮ್ಮನಾಗುತ್ತಿರೋ’ ಎಂದು ಪ್ರಶ್ನಿಸಿದೆ.
‘ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ’ ಎಂದು ಸದಾ ಜಪಿಸುತ್ತಾ ಭಯ ಸೃಷ್ಟಿಸುತ್ತಿದ್ದ ಕರ್ನಾಟಕದ ಬಿಜೆಪಿಗರ ಈ ಹೇಳಿಕೆ ನಾಚಿಕೆಗೇಡಿನದ್ದು. ಭಯೋತ್ಪಾದನೆ ನಿಗ್ರಹದಲ್ಲಿ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆಯೇ. ಯಡಿಯೂರಪ್ಪ ಸರ್ಕಾರದ ಕಾನೂನು ಸುವ್ಯವಸ್ಥೆ ವಿಫಲವಾಗಿದೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕುವಂಥ ಹೊಣೆಗೇಡಿತನದ ಹೇಳಿಕೆಯಿದು’ ಎಂದೂ ಕಾಂಗ್ರೆಸ್ ದೂರಿದೆ.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ತೇಜಸ್ವಿ ಸೂರ್ಯ, ‘ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಭಯೋತ್ಪಾದಕ ಚಟುವಟಿಕೆಯ ಕೇಂದ್ರಬಿಂದುವಾಗಿದೆ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.