ಪಟ್ನಾ: '10 ಲಕ್ಷ ಉದ್ಯೋಗ ನೀಡುವ ಭರವಸೆಯಿಂದ ತೇಜಸ್ವಿ ಯಾದವ್ ಹಿಂದೆ ಸರಿದಿದ್ದಾರೆ' ಎಂದು ಆರೋಪಿಸಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದು ತಿರುಚಿದ ವಿಡಿಯೊ ಎಂದಿರುವ ತೇಜಸ್ವಿ ಯಾದವ್, ತಮ್ಮ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿಎಂ ನಿತೀಶ್ ಕುಮಾರ್ ಅವರ ಜೊತೆ ಗಂಭೀರ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ.
'ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ನಾನು 10 ಲಕ್ಷ ಉದ್ಯೋಗವನ್ನು ಸೃಷ್ಟಿ ಮಾಡುತ್ತೇನೆ ಎಂದಿದ್ದೆ. ಆದರೆ ನಾನೀಗ ಉಪಮುಖ್ಯಮಂತ್ರಿ' ಎಂದಷ್ಟೇ ತೇಜಸ್ವಿ ಯಾದವ್ ಅವರ ಮಾತುಗಳಿರುವ ತುಂಡರಿಸಿದ ವಿಡಿಯೊವನ್ನು ಗಿರಿರಾಜ್ ಸಿಂಗ್ ಹಂಚಿಕೊಂಡಿದ್ದಾರೆ. ಬಳಿಕ ಇದರ ಪೂರ್ಣ ವಿಡಿಯೊವನ್ನು ಹಂಚಿಕೊಂಡಿರುವ ಯಾದವ್, ಕೊಟ್ಟಿರುವ ಭರವಸೆಯನ್ನು ಪೂರೈಸುವುದಾಗಿ ವಾಗ್ದಾನ ನೀಡಿದ್ದಾರೆ.
'ಉದ್ಯೋಗ ಸೃಷ್ಟಿ ವಿಚಾರವಾಗಿ ಸಿಎಂ ನಿತೀಶ್ ಕುಮಾರ್ ಜೊತೆ ಚರ್ಚಿಸಿದ್ದೇನೆ. ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೊಟ್ಟಿರುವ ಭರವಸೆತೆ ನಾನು ನಡೆಯುತ್ತೇವೆ. ಮೊದಲು ನಮಗೆ ವಿಶ್ವಾಸ ಮತ ಯಾಚನೆಯನ್ನು ಗೆಲ್ಲಬೇಕಿದೆ' ಎಂದು ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದಾರೆ.
'ಒಂದು ಅಡಿಯಷ್ಟು ಕೂದಲನ್ನು ಬಿಟ್ಟುಕೊಂಡರೆ ನೀವು ಜ್ಞಾನಿಯಾಗುವುದಿಲ್ಲ. ನಿಮ್ಮ ತುಚ್ಛ ನಡೆಯಿಂದ ಮತ್ತು ಸಾರ್ವಜನಿಕ ಹೇಳಿಕೆಗಳಿಂದ ಬಿಜೆಪಿ ಸಾಕಷ್ಟು ಅನುಭವಿಸಿದೆ' ಎಂದು ಹರಿಹಾಯ್ದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.