ಹೈದರಾಬಾದ್: ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ತಲಾ ₹5 ಕೋಟಿಗೆ ಹೆಚ್ಚಿಸಿದ್ದು, ಇದಕ್ಕಾಗಿ 2021-22ರ ಬಜೆಟ್ನಲ್ಲಿ ₹800 ಕೋಟಿ ಮೀಸಲಿಟ್ಟಿದೆ.
ಸಂಸದರ ಕ್ಷೇತ್ರಾಭಿವೃದ್ಧಿಗೆ ಕೇಂದ್ರವು ₹5 ಕೋಟಿ ಅನುದಾನ ನೀಡುತ್ತಿರುವಂತೆ ಈ ಯೋಜನೆಯಡಿ ಪ್ರತಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಅವರ ಕ್ಷೇತ್ರದ ಅಭಿವೃದ್ಧಿಗೆ ತಲಾ ₹5 ಕೋಟಿ ಅನುದಾನವನ್ನು ಚಂದ್ರಶೇಖರ್ ರಾವ್ ಸರ್ಕಾರ ತೆಗೆದಿರಿಸಿದೆ.
ವಿವಿಧ ಅಭಿವೃದ್ಧಿ ಕೆಲಸ ಮತ್ತು ಸಾರ್ವಜನಿಕ ಹಿತಾಸಕ್ತಿಯ ಚಟುವಟಿಕೆಗಳಿಗೆ ಈ ನಿಧಿಯನ್ನು ಖರ್ಚು ಮಾಡಬೇಕಿದೆ.
ಕಳೆದ ವರ್ಷದ ಬಜೆಟ್ನಲ್ಲಿ ಕ್ಷೇತ್ರಾಭಿವೃದ್ಧಿ ನಿಧಿಗೆ ₹480 ಕೋಟಿ ಮೀಸಲಿಟ್ಟಿದ್ದ ಸರ್ಕಾರ, ಪ್ರತಿ ಶಾಸಕ ಮತ್ತು ವಿಧಾನಪರಿಷತ್ ಸದಸ್ಯರಿಗೆ ತಲಾ ₹3 ಕೋಟಿ ಅನುದಾನ ಹಂಚಿಕೆ ಮಾಡಿತ್ತು.
₹2.3 ಲಕ್ಷ ಕೋಟಿಯ ಬಜೆಟ್
ತೆಲಂಗಾಣ ರಾಜ್ಯ ಸರ್ಕಾರ 2021-22ರ ಸಾಲಿಗೆ ₹2.3 ಲಕ್ಷ ಕೋಟಿಯ ಬಜೆಟ್ ಅನ್ನು ಗುರುವಾರ ಮಂಡಿಸಿದೆ.
ಹೊಸದಾಗಿ ಜಾರಿಗೆ ತಂದಿರುವ ಮುಖ್ಯಮಂತ್ರಿ ದಲಿತ ಸಬಲೀಕರಣ ಯೋಜನೆಗೆ ₹1 ಸಾವಿರ ಕೋಟಿ, ರೈತ ಬಂಧು ಯೋಜನೆಗೆ ₹14,800 ಕೋಟಿ ಹಾಗೂ ಎರಡು ಬೆಳೆಯ ಅವಧಿಗೆ ರೈತರಿಗೆ ಪ್ರೋತ್ಸಾಹ ಧನ ನೀಡಲು ₹10 ಸಾವಿರ ಕೋಟಿ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.