ADVERTISEMENT

ತೆಲಂಗಾಣ| ನಾಲ್ಕು ದಿನಗಳ ಬಿಡುವಿನ ನಂತರ 'ಭಾರತ ಜೋಡಿಸಿ ಯಾತ್ರೆ' ಮತ್ತೆ ಆರಂಭ

ಪಿಟಿಐ
Published 27 ಅಕ್ಟೋಬರ್ 2022, 3:31 IST
Last Updated 27 ಅಕ್ಟೋಬರ್ 2022, 3:31 IST
ತೆಲಂಗಾಣದಲ್ಲಿ ಸಾಗುತ್ತಿರುವ ಭಾರತ ಜೋಡಿಸಿ ಯಾತ್ರೆ
ತೆಲಂಗಾಣದಲ್ಲಿ ಸಾಗುತ್ತಿರುವ ಭಾರತ ಜೋಡಿಸಿ ಯಾತ್ರೆ    

ನಾರಾಯಣಪೇಟ್‌ (ತೆಲಂಗಾಣ): ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡಿಸಿ ಯಾತ್ರೆ (ಭಾರತ್‌ ಜೋಡೊ ಯಾತ್ರೆ) ನಾಲ್ಕು ದಿನಗಳ ಬಿಡುವಿನ ನಂತರ ಗುರುವಾರ ಬೆಳಿಗ್ಗೆ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಕ್ತಾಲ್‌ನಿಂದ ಪುನರಾರಂಭಗೊಂಡಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ, ಸಂಸದ ಉತ್ತಮ್ ಕುಮಾರ್ ರೆಡ್ಡಿ, ಸಿಎಲ್‌ಪಿ ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಪಕ್ಷದ ಹಲವಾರು ಮುಖಂಡರು ರಾಹುಲ್‌ ಅವರೊಂದಿಗೆ ಬೆಳಿಗ್ಗೆ 6.30ಕ್ಕೇ ಮಕ್ತಾಲ್‌ನಿಂದ ಯಾತ್ರೆ ಅರಂಭಿಸಿದರು.

ತೆಲಂಗಾಣದಲ್ಲಿ ಇದು ಯಾತ್ರೆಯ ಎರಡನೇ ದಿನ. ಯಾತ್ರೆ ಅಕ್ಟೋಬರ್ 23 ರಂದು ಬೆಳಿಗ್ಗೆ ಕರ್ನಾಟಕದ ರಾಯಚೂರಿನಿಂದ ನಿರ್ಗಮಿಸಿ, ಗುಡೆಬೆಳ್ಳೂರು ಮೂಲಕ ತೆಲಂಗಾಣವನ್ನು ಪ್ರವೇಶಿಸಿತ್ತು.

ADVERTISEMENT

ಅಂದು ಮಧ್ಯಾಹ್ನದ ವರೆಗೆ ನಡೆದ ಯಾತ್ರೆ ನಂತರ ಅಕ್ಟೋಬರ್ 26 ರವರೆಗೆ ವಿರಾಮ ಪಡೆಯಿತು.

ಅಕ್ಟೋಬರ್ 23 ರಂದು ರಾಷ್ಟ್ರ ರಾಜಧಾನಿಗೆ ತೆರಳಿದ್ದ ರಾಹುಲ್‌ ಗಾಂಧಿ ಅವರು, ಬುಧವಾರ ರಾತ್ರಿ ತೆಲಂಗಾಣಕ್ಕೆ ಆಗಮಿಸಿದರು.

ಯಾತ್ರೆಯು ಗುರುವಾರ 26.7 ಕಿಮೀ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತೆಲಂಗಾಣದಲ್ಲಿ ಒಟ್ಟು 16 ದಿನಗಳ ಕಾಲ ಯಾತ್ರೆ ಸಾಗಲಿದೆ. ಈ ಅವಧಿಯಲ್ಲಿ 19 ವಿಧಾನಸಭಾ ಕ್ಷೇತ್ರಗಳು ಮತ್ತು 7 ಲೋಕಸಭಾ ಕ್ಷೇತ್ರಗಳ ಒಟ್ಟು 375 ಕಿ.ಮೀ ಹಾದಿಯನ್ನು ಯಾತ್ರೆ ಕ್ರಮಿಸಲಿದೆ. ನವೆಂಬರ್ 7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ.

ಯಾತ್ರೆಗೆ ನವೆಂಬರ್ 4 ರಂದು ಒಂದು ದಿನದ ಬಿಡುವು ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.