ADVERTISEMENT

ತೆಲಂಗಾಣ: ಮೊದಲ ದಿನವೇ ಆರು ಗ್ಯಾರಂಟಿಗಳಿಗೆ ಅಂಕಿತ ಹಾಕಿದ ಸಿಎಂ ರೇವಂತ ರೆಡ್ಡಿ

ಪಿಟಿಐ
Published 7 ಡಿಸೆಂಬರ್ 2023, 18:41 IST
Last Updated 7 ಡಿಸೆಂಬರ್ 2023, 18:41 IST
<div class="paragraphs"><p>– ಪಿಟಿಐ ಚಿತ್ರ</p></div>
   

– ಪಿಟಿಐ ಚಿತ್ರ

ಹೈದರಾಬಾದ್: ಪ್ರಮಾಣ ವಚನ ಸ್ವೀಕರಿಸಿದ ರೇವಂತ್‌ ರೆಡ್ಡಿ ಅವರು ಎರಡು ಕಡತಗಳಿಗೆ ಸಹಿ ಹಾಕಿದ್ದಾರೆ. ಚುನಾವಣೆಗೂ ಮೊದಲು ಕಾಂಗ್ರೆಸ್‌ ನೀಡಿದ್ದ ಆರು ಭರವಸೆಗಳು ಮತ್ತು ಅಭಯ ಹಸ್ತಂ ಕಾಯ್ದೆಗೆ (ತೆಲಂಗಾಣ ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದ್ದು) ಸಂಬಂಧಿಸಿದ ಕಡತ ಅದರಲ್ಲಿ ಒಂದು. ಎರಡನೆಯದು ರಜನಿ ಎಂಬ ಅಂಗವಿಕಲ ಮಹಿಳೆಯ ಉದ್ಯೋಗಕ್ಕೆ ಸಂಬಂಧಿಸಿದ ಕಡತ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಮಾಡುವ ಕೆಲಸವೇ ಗ್ಯಾರಂಟಿಗಳ ಅನುಷ್ಠಾನ ಎಂದು ಚುನಾವಣಾ ಪ್ರಚಾರದ ವೇಳೆ ರೇವಂತ್‌ ರೆಡ್ಡಿ ಭರವಸೆ ನೀಡಿದ್ದರು. ಜೊತೆಗೆ, ವಾರ್ಷಿಕ ಉದ್ಯೋಗ ಕ್ಯಾಲೆಂಡರ್‌ರನ್ನು ಪರಿಚಯಿಸಲಾಗುವುದು ಎಂದೂ ಭರವಸೆ ನೀಡಿದ್ದರು. ಮೊದಲ ಉದ್ಯೋಗವನ್ನು ಅಂಗವಿಕಲ ಮಹಿಳೆಗೆ ನೀಡುವ ಮೂಲಕ ಉದ್ಯೋಗ ಖಾತ್ರಿಗೆ ನಾಂದಿ ಹಾಡಿದರು.

ADVERTISEMENT

ಜನರ ಸರ್ಕಾರದ ಪ್ರತಿಜ್ಞೆ: ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ರೇವಂತ್‌ ರೆಡ್ಡಿ, ಜನರ ಸರ್ಕಾರ ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಒಂದು ದಶಕದ ದುರಾಡಳಿತಕ್ಕೆ ರಾಜ್ಯದ ಜನರು ಕೊನೆಹಾಡಿದ್ದಾರೆ ಎಂದರು. ‘ಪ್ರಗತಿ ಭವನದ (ತೆಲಂಗಾಣ ಮುಖ್ಯಮಂತ್ರಿಯ ಸರ್ಕಾರಿ ನಿವಾಸ) ಸುತ್ತ ಇರುವ ಕಬ್ಬಿಣದ ಬೇಲಿಯನ್ನು ತೆರವುಗೊಳಿಸಲಾಗಿದೆ. ರಾಜ್ಯದ ಏಳಿಗೆಯಲ್ಲಿ ಭಾಗಿಯಾಗಲು ಬಯಸುವ ಎಲ್ಲರನ್ನೂ ಅಲ್ಲಿ ಬರಮಾಡಿಕೊಳ್ಳಲಾಗುವುದು’ ಎಂದರು.

ಪ್ರಗತಿ ಭವನವನ್ನು ‘ಜ್ಯೋತಿರಾವ್ ಫುಲೆ ಪ್ರಜಾ ಭವನ’ ಎಂದು ಮರುನಾಮಕರಣ ಮಾಡಿದ ರೆಡ್ಡಿ ಅವರು, ‘ಪ್ರತಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಅಲ್ಲಿ ಪ್ರಜಾ ದರ್ಬಾರ್‌ ನಡೆಸಲಾಗುವುದು. ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳನ್ನು ಅಲ್ಲಿ ಸ್ವೀಕರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.