ADVERTISEMENT

ಟೆಲಿಕಾಂ ಟವರ್‌ಗಳ ಜಖಂ: ಕೇಂದ್ರ, ಪಂಜಾಬ್ ಸರ್ಕಾರಕ್ಕೆ ನೋಟಿಸ್

ಪಿಟಿಐ
Published 5 ಜನವರಿ 2021, 10:28 IST
Last Updated 5 ಜನವರಿ 2021, 10:28 IST
   

ಚಂಡೀಗಡ: ಟೆಲಿಕಾಂ ಟವರ್‌ಗಳನ್ನು ಜಖಂಗೊಳಿಸಿದ ಘಟನೆಗೆ ಸಂಬಂಧಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮಂಗಳವಾರ ಪಂಜಾಬ್ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ರಿಲಯನ್ಸ್‌ ಜಿಯೊ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಈ ಕುರಿತು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಟವರ್‌ಗಳಿಗೆ ಹಾನಿ ಮತ್ತು ಒತ್ತಾಯಪೂರ್ವಕವಾಗಿ ತನ್ನ ಮಳಿಗೆಗಳನ್ನು ಮುಚ್ಚಿಸುತ್ತಿರುವ ‘ಕಿಡಿಗೇಡಿಗಳ’ ವಿರುದ್ಧ ಕ್ರಮಜರುಗಿಸಲು ಕೋರಿತ್ತು.

ಪಂಜಾಬ್‌ನಲ್ಲಿ 1,500ಕ್ಕೂ ಅಧಿಕ ಮೊಬೈಲ್‌ ಟವರ್‌ಗಳನ್ನು ಜಖಂಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೃಷಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೊ ಈ ಕುರಿತ ತನ್ನ ಅರ್ಜಿಯಲ್ಲಿ ಕೆಲವು ಹಿತಾಸಕ್ತಿಗಳು ತಮ್ಮ ಸಂಸ್ಥೆಯ ವಿರುದ್ಧ ವದಂತಿ ಹಬ್ಬಿಸುತ್ತಿದ್ದಾರೆ. ತಾನು ಅಥವಾ ತಮ್ಮ ಮೂಲಸಂಸ್ಥೆಯು ಗುತ್ತಿಗೆ ಕೃಷಿ ಕ್ಷೇತ್ರವನ್ನು ಪ್ರವೇಶಿಸುವ ಯಾವುದೇ ಚಿಂತನೆಯನ್ನು ಹೊಂದಿಲ್ಲ ಎಂದು ತಿಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧೀರ್ ಮಿಠ್ಠಲ್ ನೋಟಿಸ್‌ ನೀಡಿದ್ದು, ವಿಚಾರಣೆಯನ್ನು ಫೆಬ್ರುವರಿ 8ಕ್ಕೆ ಮುಂದೂಡಿದರು ಎಂದು ರಿಲಯನ್ಸ್ ಜಿಯೊ ಪರ ವಕೀಲ ಆಶೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.