ADVERTISEMENT

ಕೋವಿಡ್–19: ಆಯುರ್ವೇದ ಚಿಕಿತ್ಸೆಗಾಗಿ ಜಾಮೀನು ಕೋರಿದ ಅಸಾರಾಂ ಬಾಪು

ಪಿಟಿಐ
Published 10 ಮೇ 2021, 16:14 IST
Last Updated 10 ಮೇ 2021, 16:14 IST
ಅಸಾರಾಂ ಬಾಪು
ಅಸಾರಾಂ ಬಾಪು   

ಜೋಧಪುರ: ಕೋವಿಡ್‌–19 ಸೋಂಕಿಗೆ ಹರಿದ್ವಾರದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುವುದಕ್ಕಾಗಿ ಜಾಮೀನು ನೀಡಬೇಕು ಎಂದು ಸ್ವಘೋಷಿತ ದೇವಮಾನವ ಅಸಾರಾಂ ಬಾಪು ರಾಜಸ್ಥಾನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಬುಧವಾರ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಅವರನ್ನು ಜೋಧ್‌ಪುರ ಕೇಂದ್ರ ಕಾರಾಗೃಹದಿಂದ ಎಂ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 8ರಂದು ಭದ್ರತೆಯ ಕಾರಣಕ್ಕಾಗಿ ಅವರನ್ನು ಎಂ.ಜಿ. ಆಸ್ಪತ್ರೆಯಿಂದ ಜೋಧಪುರದ ಏಮ್ಸ್‌ಗೆ ಸ್ಥಳಾಂತರ ಮಾಡಲಾಗಿತ್ತು.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ದೇವೇಂದ್ರ ಕಚ್ಚಾವಾಹ ಅವರಿದ್ದ ನ್ಯಾಯಪೀಠವು ಅಸಾರಾಂ ವೈದ್ಯಕೀಯ ವರದಿ ಸಲ್ಲಿಸುವಂತೆ ಏಮ್ಸ್‌ ಆಸ್ಪತ್ರೆಗೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಮೇ 13ಕ್ಕೆ ನಿಗದಿಪಡಿಸಿದೆ.

ಅಸಾರಾಂ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೋವಿಡ್ ಸೋಂಕು ಸಹ ತಗುಲಿದೆ. ಹೀಗಾಗಿ ಅವರು ಹರಿದ್ವಾರದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಬಯಸಿದ್ದಾರೆ. ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಅಸಾರಾಂ ಪರ ವಕೀಲ ಪ್ರದೀಪ್ ಚೌಧರಿ ಹೇಳಿದ್ದಾರೆ.

ಹದಿಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾರಣಕ್ಕಾಗಿ ಅಸಾರಾಂ ಅವರಿಗೆ ಜೈಲುಶಿಕ್ಷೆ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.