ನಾಗರ್ಕರ್ನೂಲ್ (ತೆಲಂಗಾಣ): ‘ಇಲ್ಲಿನ ಶ್ರೀಶೈಲಂ ಎಡ ದಂಡೆ ಕಾಲುವೆಯ (ಎಸ್ಎಲ್ಬಿಸಿ) ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿಯ ಜೀವವೂ ಅಪಾಯದಲ್ಲಿದೆ’ ಎಂದು ತೆಲಂಗಾಣ ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸುರಂಗಕ್ಕೆ ಒಂದೇ ಪ್ರವೇಶ/ ನಿರ್ಗಮನ ದ್ವಾರ ಇರುವುದರಿಂದ ರಕ್ಷಣಾ ಪ್ರಕ್ರಿಯೆ ಅತ್ಯಂತ ಕಷ್ಟಕರ ಮತ್ತು ಸವಾಲಿನದ್ದಾಗಿದೆ ಎಂದು ಈ ಕಾರ್ಯಾಚರಣೆಯಲ್ಲಿ ತೊಡಗಿರುವ ತಜ್ಞರು ಹೇಳಿದ್ದಾರೆ’ ಎಂದರು.
ಭಾಗಶಃ ಕುಸಿದಿರುವ ಸುರಂಗದಲ್ಲಿ ಸಿಲುಕಿರುವ ಎಂಟು ಕಾರ್ಮಿಕರನ್ನು ರಕ್ಷಿಸಲು ಸತತ ನಾಲ್ಕನೇ ದಿನವಾದ ಮಂಗಳವಾರವೂ ಕಾರ್ಯಾಚರಣೆ ನಡೆಯಿತು. ಭೂಮಿಯ ಒಳಗಿನ ಟೆಕ್ಟಾನಿಕ್ ಫಲಕಗಳು ಸ್ವಲ್ಪ ಪ್ರಮಾಣದಲ್ಲಿ ಚಲಿಸಿದ್ದೇ ಸುರಂಗದ ಒಂದು ಭಾಗ ಕುಸಿಯಲು ಕಾರಣ ಎಂದು ಸಚಿವರು ಅಭಿಪ್ರಾಯಪಟ್ಟರು.
‘ಸುರಂಗದಲ್ಲಿ ಭಾರಿ ಪ್ರಮಾಣದಲ್ಲಿ ಕೆಸರು ತುಂಬಿದ್ದು, ನೀರಿನ ಹರಿವು ಮುಂದುವರಿದಿದೆ. ಇದರಿಂದ ರಕ್ಷಣಾ ತಂಡಗಳ ಸಿಬ್ಬಂದಿಯ ಪ್ರಾಣಕ್ಕೂ ಅಪಾಯ ಉಂಟಾಗಬಹುದು ಎಂಬ ಅಭಿಪ್ರಾಯವನ್ನು ಕೆಲವು ತಜ್ಞರು ವ್ಯಕ್ತಪಡಿಸಿದ್ದಾರೆ. ತಜ್ಞರ ಅಭಿಪ್ರಾಯವನ್ನು ತೆಗೆದುಕೊಂಡು, ರಕ್ಷಣಾ ಕಾರ್ಯಾಚರಣೆಯನ್ನು ಹೇಗೆ ಮುಂದುವರಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ಸೇನೆ, ನೌಕಾಪಡೆಯ ಮರೀನ್ ಕಮಾಂಡೊ ಫೋರ್ಸ್, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಜಿಎಸ್ಐ, ರ್ಯಾಟ್ ಮೈನರ್ಸ್ ಮತ್ತು ಸಿಂಗರೇಣಿ ಕಾಲಿಯರೀಸ್ ಕಂಪನಿಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಮಿಕರು ಸಿಲುಕಿರಬಹುದು ಎನ್ನಲಾದ ಜಾಗಕ್ಕೆ ಆಮ್ಲಜನಕವನ್ನು ನಿರಂತರ ಪೂರೈಸಲಾಗುತ್ತಿದೆ. ಆದರೆ ಈವರೆಗೂ ಕಾರ್ಮಿಕರ ಸಂಪರ್ಕ ಸಾಧ್ಯವಾಗಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.