ADVERTISEMENT

ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಹಿಂದಿನ ಭೀಕರತೆ ತೆರೆದಿಟ್ಟ ಪೊಲೀಸ್‌ ದಾಖಲೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:19 IST
Last Updated 1 ಡಿಸೆಂಬರ್ 2019, 13:19 IST
   

ಹೈದರಾಬಾದ್‌: ಪಶುವೈದ್ಯೆಯ ಮೇಲೆ ನಡೆದಸಾಮೂಹಿಕಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಬೆನ್ನಲ್ಲೇ ಅಮಾನವೀಯ ಘಟನೆಯ ಭೀಕರ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿವೆ. ಈ ಬಗ್ಗೆ ಎನ್‌ಡಿಟಿವಿಯು ಪೊಲೀಸ್‌ ದಾಖಲೆಗಳನ್ನು ಕಲೆ ಹಾಕುವ ಮೂಲಕ ಪ್ರಕರಣದ ಮಾಹಿತಿಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ.

ಹತ್ಯೆಯಾಗಿರುವ ಪಶುವೈದ್ಯೆ ಶಂಶಾದ್‌ಬಾದ್‌ನ ಟೋಲ್‌ ಪ್ಲಾಜಾ ಬಳಿ ಬುಧವಾರ ಸಂಜೆ 6:15 ರ ಸುಮಾರಿಗೆ ತನ್ನ ದ್ವಿಚಕ್ರ ವಾಹನ ಪಾರ್ಕ್‌ ಮಾಡಿ ಚರ್ಮರೋಗ ತಜ್ಞರನ್ನು ಭೇಟಿಯಾಗಲು ಟ್ಯಾಕ್ಸಿಯಲ್ಲಿ ತೆರಳಿದ್ದರು. ವಾಹನ ಪಾರ್ಕ್‌ ಮಾಡಿದ್ದನ್ನು ಗಮನಿಸಿದ್ದ ಆರೋಪಿಗಳು ಅದರ ಗಾಲಿಯನ್ನು ಪಂಕ್ಚರ್‌ ಮಾಡಿದ್ದರು.

ಚರ್ಮ ವೈದ್ಯರನ್ನು ಭೇಟಿಯಾಗಿ ರಾತ್ರಿ 9:15 ರ ಸುಮಾರಿಗೆ ಟೋಲ್‌ ಪ್ಲಾಜಾದ ಬಳಿ ಬಂದಿದ್ದ ಪಶುವೈದ್ಯೆ ತನ್ನ ವಾಹನ ಪಂಕ್ಚರ್‌ ಆಗಿದ್ದನ್ನು ಗಮನಿಸಿದ್ದರು. ಆಗ ಪಶುವೈದ್ಯೆಗೆ ಸಹಾಯ ಮಾಡುವ ನೆಪದಲ್ಲಿ ಬಂದಿದ್ದ ಆರೋಪಿಗಳು ಅವರನ್ನು ಸಮೀಪದ ಪೊದೆಯತ್ತಒತ್ತಾಯ‍ಪೂರ್ವಕವಾಗಿ ಎಳೆದೊಯ್ದರು.

ADVERTISEMENT

ಈ ಸಂದರ್ಭಆಕೆ ಸಹಾಯಕ್ಕಾಗಿ ಕೂಗಿದ್ದಾರೆ. ಕೂಗಾಟ ನಿಯಂತ್ರಿಸಲು ಮತ್ತು ನಶೆ ಬರುವಂತೆ ಮಾಡಲು ವೈದ್ಯೆಯ ಬಾಯಲ್ಲಿ ಆರೋಪಿಗಳು ವಿಸ್ಕಿ ಸುರಿದಿದ್ದಾರೆ.

ಅತ್ಯಾಚಾರದ ನಂತರತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ವೈದ್ಯೆ ಪ್ರಜ್ಞಾಹೀನರಾದರು. ಅದಾದ ಕೆಲ ನಿಮಿಷಗಳಲ್ಲಿ ಮತ್ತೆ ಪ್ರಜ್ಞೆಗೆ ಮರಳಿರುವ ವೈದ್ಯೆಯನ್ನು ಉಸಿರುಗಟ್ಟಿಸಿಕೊಂದರು. ಶವವನ್ನು ತಮ್ಮದೇ ಟ್ರಕ್‌ನಲ್ಲಿ ಟೋಲ್‌ ಪ್ಲಾಜಾದಿಂದ ಸುಮಾರು 27 ಕಿ.ಮೀ. ದೂರ ಕೊಂಡೊಯ್ದು, ರಾತ್ರಿ 2:30 ಸುಮಾರಿಗೆ ಸೇತುವೆಯೊಂದರ ಕೆಳಗೆಶವ ಇಳಿಸಿ, ಅದರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು.

ಈ ಅಮಾನವೀಯ ಘಟನೆಯಲ್ಲಿ ಮೊದಲ ಆರೋಪಿಯಾಗಿರುವ ಟ್ರಕ್‌ ಡ್ರೈವರ್‌ ಚಾಲನಾ ಪರವಾನಗಿ ಎರಡು ವರ್ಷಗಳ ಹಿಂದೆಯೇ ರದ್ದಾಗಿತ್ತು.

ಪೊಲೀಸರ ಅಸಡ್ಡೆ ವರ್ತನೆ: ವ್ಯಾಪಕ ಆಕ್ರೋಶ

ನಾಪತ್ತೆಯಾಗಿದ್ದ ವೈದ್ಯೆಯ ಬಗ್ಗೆ ದೂರು ಸಲ್ಲಿಸಲು ರಾತ್ರಿ 10 ಗಂಟೆ ವೇಳೆಗೆ ಅವರ ಮನೆಯವರು ಪೊಲೀಸ್‌ ಠಾಣೆಗೆ ತೆರಳಿದಾಗ, ಪೊಲೀಸರು ಸಕಾಲಕ್ಕೆ ನೆರವಾಗಲಿಲ್ಲ.

ಈ ಕುರಿತು ಪಶುವೈದ್ಯೆಯ ಕುಟುಂಬದ ಸದಸ್ಯರ ಪ್ರತಿಕ್ರಿಯೆ ಉಲ್ಲೇಖಿಸಿ ವರದಿ ಮಾಡಿರುವ ಎನ್‌ಡಿಟಿವಿ, ‘ದೂರು ಕೊಡಲು ಒಂದು ಪೊಲೀಸ್‌ ಠಾಣೆಗೆ ಹೋದರೆಅಲ್ಲಿನ ಪೊಲೀಸರು ಮತ್ತೊಂದು ಠಾಣೆಗೆ ಹೋಗಲು ಹೇಳಿದರು. ಮತ್ತೊಂದು ಪೊಲೀಸ್‌ ಠಾಣೆಗೆ ತೆರಳಿದಾಗ ಇನ್ನೊಂದು ಪೊಲೀಸ್‌ ಠಾಣೆಗೆ ಹೋಗುವಂತೆ ಹೇಳಿದರು,’ ಎಂದಿದ್ದಾರೆ.

ವೈದ್ಯೆಯು ತಮ್ಮ ಸ್ವ ಇಚ್ಛೆಯಿಂದಲೇ ಮನೆಯಿಂದ ಹೊರ ಹೋಗಿದ್ದಾರೆ ಎಂಬಂತಹ ವರ್ತನೆಯನ್ನು ಪೊಲೀಸರು ತೋರಿಸಿದರು ಎಂದು ಮನೆಯವರು ನೋವು ಹಂಚಿಕೊಂಡಿದ್ದಾರೆ.ಪೊಲೀಸರ ಈ ಅಸಡ್ಡೆ ವರ್ತನೆಗೆ ‌ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಹಾನುಭೂತಿ ಬೇಡ

ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹೈದರಾಬಾದ್‌ನಲ್ಲಿ ವೈದ್ಯೆ ವಾಸಿಸುತ್ತಿದ್ದ ಕಾಲೊನಿಯ ನಿವಾಸಿಗಳು ಗೇಟ್‌ಗಳಿಗೆ ಬೀಗ ಹಾಕಿ ಪ್ರತಿಭಟಿಸಿದ್ದಾರೆ. ‘ಮಾಧ್ಯಮಗಳು ಬೇಡ, ಪೊಲೀಸರು ಬೇಡ, ಹೊರಗಿನವರು ಬೇಡ (No Media, No Police, No Outsiders)’ ಎಂಬ ಬರವಣಿಗೆ ಹೊಂದಿರುವ ಫಲಕಗಳು ಕಾಲೊನಿಯ ಗೇಟ್‌ ಬಳಿ ಕಂಡುಬಂದಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.