ADVERTISEMENT

ದೇಶಕ್ಕಾಗಿ ದುಡಿಯಲು ನಿರ್ಭಯಾ ಅತ್ಯಾಚಾರಿಗಳು ಸಿದ್ಧ: ವಕೀಲ 

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 11:35 IST
Last Updated 19 ಮಾರ್ಚ್ 2020, 11:35 IST
   

ನವದೆಹಲಿ: ಗಲ್ಲು ಶಿಕ್ಷೆಯಿಂದ ಪಾರಾಗಲು ನಿರ್ಭಯಾ ಅತ್ಯಾಚಾರಿಗಳು ಗುರುವಾರ ಸರಣಿ ಪ್ರಯತ್ನಗಳನ್ನು ನಡೆಸಿದರು. ಪವನ್‌ ಗುಪ್ತಾ ಎಂಬಾತ ನ್ಯಾಯಪರಿಹಾರಾತ್ಮಕ ಅರ್ಜಿ ಸಲ್ಲಿಸಿದರೆ, ಅಕ್ಷಯ್‌ ಕುಮಾರ್‌ ಎಂಬಾತ ರಾಷ್ಟ್ರಪತಿಗಳು ತನ್ನ ದಯಾ ಅರ್ಜಿ ನಿರಾಕರಿಸಿರುವುದರ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ. ಈ ಮಧ್ಯೆ ದೆಹಲಿಯ ಪಟಿಯಾಲ ಕೋರ್ಟ್‌ ಗಲ್ಲು ಶಿಕ್ಷೆಗೆ ತಡೆ ನೀಡಲು ನಿರಾಕರಿಸಿತು.

ಇದರೊಂದಿಗೆ, ನಾಲ್ವರು ಅಪರಾಧಿಗಳಿಗೆ ಶುಕ್ರವಾರ ಬೆಳಗ್ಗೆ ಗಲ್ಲು ಜಾರಿಯಾಗುವುದು ಖಚಿತವಾಗುತ್ತಿದ್ದಂತೆ ದೆಹಲಿಯ ಪಟಿಯಾಲ ಕೋರ್ಟ್‌ ಎದುರು ನಿಂತು ಮಾತನಾಡಿದ ಅಪರಾಧಿಗಳ ಪರ ವಕೀಲ ಎ.ಪಿ ಸಿಂಗ್‌, ‘ಶಿಕ್ಷೆಗೆ ಗುರಿಯಾಗಿರುವ ಅತ್ಯಾಚಾರಿಗಳು ದೇಶ ಸೇವೇಗೆ ಸಿದ್ಧರಿದ್ದಾರೆ. ಅವರಿಗೆ ಗಲ್ಲು ಶಿಕ್ಷೆ ನೀಡಬಾರದು,’ ಎಂಬ ಹೊಸ ವಾದವನ್ನು ದೇಶದ ಮುಂದಿಟ್ಟಿದ್ದಾರೆ.

"ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಸರ್ಕಾರದ ಪ್ರಸ್ತಾವ ಪೂರ್ವಾಗ್ರಹ ಪೀಡಿತವಾಗಿತ್ತು. ಅಪರಾಧಿಗಳ ಜೀವವನ್ನು ಸರ್ಕಾರಗಳು ರಾಜಕೀಯಕ್ಕೆ ಬಳಿಸಿಕೊಂಡಿವೆ. ಆದರೆ, ಅವರ ಜೀವನವನ್ನು ಬಳಸಿಕೊಳ್ಳಬೇಕು. ಅವರನ್ನು ಪಾಕಿಸ್ತಾನ ಅಥವಾ ಚೀನಾದ ಗಡಿಗೆ ರವಾನಿಸಿ. ಆದರೆ, ನೇಣಿಗೇರಿಸಬೇಡಿ. ಅವರನ್ನು ನೇಣಿಗೇರಿಸುವುದರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆಯೇ? ಅವರನ್ನು ನೇಣಿಗೇರಿಸಿದರೂ, ಒಂದೆರಡು ವರ್ಷಗಳ ನಂತರ ಜನ ಮರೆತುಬಿಡುತ್ತಾರೆ. ಆದರೆ, ಅವರ ಕುಟುಂಬಗಳು ನರಳುತ್ತವೆ. ಅವರನ್ನು ಜೈಲಿನಲ್ಲೇ ಇರಲಾದರೂ ಬಿಡಿ. ಅವರನ್ನು ವೈದ್ಯಕೀಯ ಪ್ರಯೋಗಗಳಿಗಾದರೂ ಬಳಸಿಕೊಳ್ಳಿ. ಗಡಿ ಕಾಯಲು ಕಳುಹಿಸಿ. ಗಲ್ಲಿಗೇರಿಸಬೇಡಿ,’ ಎಂದು ಎಪಿ ಸಿಂಗ್‌ ಮಾಧ್ಯಮಗಳ ಮುಂದೆ ಹೇಳಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.