ADVERTISEMENT

ರೈತರೆಂದು ಹೇಳಿಕೊಂಡ ಅವರು ನನ್ನನ್ನು ಹೊಡೆದು ಕೊಂದೇಬಿಡುತ್ತಿದ್ದರು: ಕಂಗನಾ ಆತಂಕ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:47 IST
Last Updated 3 ಡಿಸೆಂಬರ್ 2021, 15:47 IST
ಕಂಗನಾ ರನೌತ್‌
ಕಂಗನಾ ರನೌತ್‌   

ಚಂಡೀಗಢ: ಪಂಜಾಬ್‌ನ ಕಿರಾತ್‌ಪುರ್ ಸಾಹಿಬ್ ಪಟ್ಟಣದಲ್ಲಿ ಶುಕ್ರವಾರ ನಟಿ ಕಂಗನಾ ರನೌತ್‌ ಅವರ ಕಾರನ್ನು ಸುತ್ತುವರಿದ ರೈತ ಹೋರಾಟಗಾರರು, ರೈತ ಮಹಿಳೆಯರ ವಿರುದ್ಧದ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಚಂಡೀಗಢ-ಉನಾ ಹೆದ್ದಾರಿಯಲ್ಲಿರುವ ಬುಂಗಾ ಸಾಹಿಬ್ ಗುರುದ್ವಾರದ ಸಮೀಪ ಈ ಘಟನೆ ನಡೆದಿದೆ. ಮುಂಬೈಗೆ ತೆರಳಲು ಅವರು ಮನಾಲಿಯಿಂದ ಚಂಡೀಗಢಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಕಂಗನಾ ಕಾರು ಸುತ್ತುವರಿದ ಪ್ರತಿಭಟನಾಕಾರರು, ರೈತ ಮಹಿಳೆಯರ ಕುರಿತು ಅವರು ನೀಡಿದ್ದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿವೆ. ಕಾರಿಗೆ ಮುತ್ತಿಗೆ ಹಾಕದಂತೆ, ದಾರಿ ಬಿಟ್ಟುಕೊಡುವಂತೆ ಪೊಲೀಸರು ರೈತರ ಮನವೊಲಿಸುತ್ತಿರುವುದೂ ಆ ವಿಡಿಯೊದಲ್ಲಿದೆ.

ADVERTISEMENT

"ನಾನು ಹಿಮಾಚಲದಿಂದ ಹೊರಟು ಪಂಜಾಬ್‌ಗೆ ಬಂದಿದ್ದೇನೆ. ವಿಮಾನ ರದ್ದಾದ ಹಿನ್ನೆಲೆಯಲ್ಲಿ ನಾನು ಕಾರಿನಲ್ಲಿ ಪ್ರಯಾಣಿಸುತ್ತಿದ್ದೇನೆ. ರೈತರೆಂದು ಬಿಂಬಿಸಿಕೊಂಡ ಗಂಪು ನನ್ನ ಕಾರಿಗೆ ಮುತ್ತಿಗೆ ಹಾಕಿದೆ. ಅವರು ನನ್ನನ್ನು ನಿಂದಿಸಿದ್ದಾರೆ, ನನ್ನನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ," ಎಂದು ಕಂಗಾನ ಅವರು ವಿಡಿಯೊವೊಂದನ್ನು ಮಾಡಿ ಬಿಡುಗಡೆ ಮಾಡಿದ್ದಾರೆ.

"ಇಂಥ ಗುಂಪು ಹಲ್ಲೆಗಳು ಈ ದೇಶದಲ್ಲಿ ಬಹಿರಂಗವಾಗಿ ನಡೆಯುತ್ತಿವೆ. ನನಗೆ ಭದ್ರತೆ ಇಲ್ಲದಿದ್ದರೆ ಏನಾಗಿರುತ್ತಿತ್ತೋ? ಪೊಲೀಸರು ಇಲ್ಲಿ ಇರದಿದ್ದರೆ ಅವರು ಬಹಿರಂಗವಾಗಿ ಹಲ್ಲೆ ನಡೆಸುತ್ತಿದ್ದರು. ಈ ಜನರಿಗೆ ನಾಚಿಕೆಯಾಗಬೇಕು," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂತರ, ರೈತ ಮಹಿಳೆಯರೊಂದಿಗೆ ಸೌಹಾರ್ದವಾಗಿ ಮಾತನಾಡುತ್ತಿರುವ, ಅವರ ಕೈ ಹಿಡಿದುಕೊಂಡಿರುವ ವಿಡಿಯೊವೊಂದು ಬಿಡುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.