ADVERTISEMENT

ಲಖಿಂಪುರದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಿದವರು ತಪ್ಪಿತಸ್ಥರಲ್ಲ: ಟಿಕಾಯತ್

ಪಿಟಿಐ
Published 9 ಅಕ್ಟೋಬರ್ 2021, 11:12 IST
Last Updated 9 ಅಕ್ಟೋಬರ್ 2021, 11:12 IST
ರಾಕೇಶ್ ಟಿಕಾಯತ್ (ಪಿಟಿಐ ಚಿತ್ರ)
ರಾಕೇಶ್ ಟಿಕಾಯತ್ (ಪಿಟಿಐ ಚಿತ್ರ)   

ನವದೆಹಲಿ: ‘ಉತ್ತರ ಪ್ರದೇಶ ಲಖಿಂಪುರ ಖೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಿದವರನ್ನು ತಪ್ಪಿತಸ್ಥರು ಎಂಬುದಾಗಿ ಪರಿಗಣಿಸುವುದಿಲ್ಲ. ಅವರು ಪ್ರತಿಭಟನಾಕಾರರ ಮೇಲೆ ಎಸ್‌ಯುವಿ ಚಲಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದಾರಷ್ಟೆ’ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಪ್ರತಿಭಟನಾಕಾರರ ಮೇಲೆ ಎಸ್‌ಯುವಿ ಚಲಾಯಿಸಲಾಗಿದೆ ಎನ್ನಲಾಗಿದ್ದು, ಕೆಲವರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ಕೆಲವರು ಸಾವಿಗೀಡಾಗಿದ್ದರು. ಘಟನೆಯಲ್ಲಿ ರೈತರು, ಪತ್ರಕರ್ತ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದರು.

‘ಬೆಂಗಾವಲು ಪಡೆಯ ವಾಹನಗಳು ಚಲಿಸಿ ರೈತರು ಮೃತಪಟ್ಟ ಬಳಿಕ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಇದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಷ್ಟೆ. ಅವರನ್ನು ತಪ್ಪಿತಸ್ಥರು ಎಂದು ನಾನು ಪರಿಗಣಿಸುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಟಿಕಾಯತ್ ಉತ್ತರಿಸಿದ್ದಾರೆ.

‘ಅದು ಬಿಜೆಪಿ ಕಾರ್ಯಕರ್ತರದ್ದೇ ಆಗಿರಲಿ, ರೈತರದ್ದೇ ಆಗಿರಲಿ, ಜೀವಹಾನಿಯಾಗಿರುವುದಕ್ಕೆ ನಮಗೆ ಬೇಸರವಾಗಿದೆ. ಅದೊಂದು ದುರದೃಷ್ಟಕರ ಘಟನೆ. ನ್ಯಾಯ ದೊರೆಯುವ ಭರವಸೆಯಲ್ಲಿ ನಾವಿದ್ದೇವೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾರದ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಲಖಿಂಪುರ ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಹಾಗೂ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.