ADVERTISEMENT

ದೇವಾಲಯಗಳ ಮುಂದೆ ಕುರಾನ್‌ ಪಠಣದ ಬೆದರಿಕೆ; ಎಸ್‌ಪಿ ನಾಯಕಿ ವಿರುದ್ಧ ಪ್ರಕರಣ

ಐಎಎನ್ಎಸ್
Published 19 ಏಪ್ರಿಲ್ 2022, 7:23 IST
Last Updated 19 ಏಪ್ರಿಲ್ 2022, 7:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಲೀಗಡ: ಹಿಂದೂ ದೇವಾಲಯಗಳ ಮುಂದೆ ಕುರಾನ್‌ ಪಠಣ ಮಾಡುವುದಾಗಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮಹಿಳಾ ಘಟಕದ ನಾಯಕಿ ರುಬಿನಾ ಖಾನ್‌ ಹೇಳಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಮೇಲೆ ಅವರ ವಿರುದ್ಧ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮಧ್ಯೆ ಹಿಂದೂ ಕಾರ್ಯಕರ್ತರು ಅಲೀಗಡದ 21 ಕ್ರಾಸಿಂಗ್‌ ಪಾಯಿಂಟ್‌ನಲ್ಲಿ ಧ್ವನಿವರ್ಧಕ ಅಳವಡಿಸಿ ಹನುಮಾನ್‌ ಚಾಲೀಸ ಪಠಿಸುವುದಾಗಿ ಪ್ರಕಟಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ರುಬಿನಾ, ಮುಸ್ಲಿಂ ಮಹಿಳೆಯರು ದೇವಾಲಯಗಳ ಮುಂದೆ ಕುರಾನ್‌ ಪಠಿಸುವುದಾಗಿ ಹೇಳಿದ್ದಾರೆ.

'ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯುವಂತೆ ಆಗ್ರಹಿಸುವ ಮೂಲಕ ಮುಸ್ಲಿಂ ಸಮುದಾಯವನ್ನು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಲಾಗುತ್ತಿದೆ. ರಾಜ್ಯ ಸರ್ಕಾರವು ಬಜರಂಗ ದಳದಂತಹ ಬಲಪಂಥೀಯ ಸಂಘಟನೆಗಳ ಬಗ್ಗೆ ಮೃದು ಧೋರಣೆ ಹೊಂದಿದೆ' ಎಂದು ಆರೋಪಿಸಿದ್ದಾರೆ.

ADVERTISEMENT

ಬಾಬರಿ ಮಸೀದಿ ಪ್ರಕರಣದಲ್ಲಿ ಕಕ್ಷಿದಾರರಾಗಿದ್ದ ಇಕ್ಬಾಲ್‌ ಅನ್ಸಾರಿ ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದು, 'ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮುಖಂಡರು ಲಾಭ ಪಡೆಯುವುದನ್ನು ನಿಲ್ಲಿಸಬೇಕು. ನಮಾಜ್‌ ಅನ್ನು ಮಸೀದಿಗಳಲ್ಲಿ ನಡೆಸಬೇಕು, ದೇವಾಲಯಗಳ ಮುಂದೆ ಅಲ್ಲ...' ಎಂದಿದ್ದಾರೆ.

ಜನರನ್ನು ಪ್ರಚೋದಿಸುವಂತಹ ಹೇಳಿಕೆ ನೀಡುವುದನ್ನು ಮುಖಂಡರು ನಿಲ್ಲಿಸಬೇಕು ಎಂದು ಹನುಮಾನ್ ಗಡಿ ದೇವಾಲಯದ ಮಹಂತ ರಾಜು ದಾಸ್‌ ಹೇಳಿದ್ದಾರೆ.

'ಯಾರಾದರು ದೂರು ತಂದರೆ, ನಾವು ದೇವಸ್ಥಾನದ ಧ್ವನಿವರ್ಧಕಗಳ ಧ್ವನಿಯ ಪ್ರಮಾಣವನ್ನು ಕಡಿಮೆ ಮಾಡುತ್ತೇವೆ. ಮುಸ್ಲಿಮರೂ ಸಹ ಅದನ್ನು ಅನುಸರಿಸಬೇಕು, ಇದು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.