ಸಾಂದರ್ಭಿಕ ಚಿತ್ರ
ಗೊಂಡಾ: ಮೂವರು ವ್ಯಕ್ತಿಗಳು ಬಾಲಕನಿಗೆ ಬಲವಂತವಾಗಿ ಮೂತ್ರ ಕುಡಿಸಿದ ಹೇಯ ಘಟನೆ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ.
ತನ್ನ 15 ವರ್ಷ ವಯಸ್ಸಿನ ಸಹೋದರನಿಗೆ ಮೂವರು ವ್ಯಕ್ತಿಗಳು, ಮದ್ಯದ ಬಾಟಲಿಯಲ್ಲಿ ಮೂತ್ರ ತುಂಬಿಸಿ ಬಲವಂತವಾಗಿ ಕುಡಿಸಲು ಯತ್ನಿಸಿದ್ದಾರೆ ಎಂದು ಸಂತ್ರಸ್ತನ ಅಣ್ಣ ಮಂಗಳವಾರ ಶ್ರಾವಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭುರೆ ತಿವಾರಿ ಅಲಿಯಾಸ್ ಕಿಶನ್, ದಿಲೀಪ್ ಮಿಶ್ರಾ ಮತ್ತು ಸತ್ಯಂ ತಿವಾರಿ ಎಂಬ ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ. ಇವರೆಲ್ಲರೂ ಜಿಲ್ಲೆಯ ರಾಮ್ಪುರ ತ್ರಿಭೌನ ಗ್ರಾಮದ ನಿವಾಸಿಗಳಾಗಿದ್ದು, ಸಂತ್ರಸ್ತ ಬಾಲಕನ ಕುಟುಂಬವೂ ಇದೇ ಗ್ರಾಮದಲ್ಲಿ ವಾಸಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?:
ಸಂತ್ರಸ್ತ ಬಾಲಕನ ಸಹೋದರ ನೀಡಿರುವ ದೂರಿನ ಪ್ರಕಾರ, ‘ಜು.1ರಂದು ಆರೋಪಿ ಕಿಶನ್, ವಾಹನದಲ್ಲಿ ಡಿಸ್ಕ್ ಜಾಕಿ (ಡಿಜೆ) ಅಳವಡಿಸುವಂತೆ ಬಾಲಕನನ್ನು ಕೇಳಿದ. ಬಳಿಕ ಜನರೇಟರ್ ಅನ್ನೂ ಅಳವಡಿಸಲು ಸೂಚಿಸಿದ. ಆದರೆ, ಬಾಲಕ ಜನರೇಟರ್ ಅಳವಡಿಸಲು ನಿರಾಕರಿಸಿದ. ಬಳಿಕ ಸ್ಥಳಕ್ಕೆ ಇನ್ನಿಬ್ಬರು ಆರೋಪಿಗಳಾದ ಸತ್ಯಂ ಮತ್ತು ದಿಲೀಪ್ ಬಂದರು. ಹೇಳಿದ್ದನ್ನು ಮಾಡದೇ ಇದ್ದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ ಎಂದು ಬಾಲಕನಿಗೆ ಬೆದರಿಕೆ ಹಾಕಿದರು.’
‘ಈ ವೇಳೆ, ಆರೋಪಿ ದಿಲೀಪ್ ಮದ್ಯದ ಬಾಟಲಿಯಲ್ಲಿ ಮೂತ್ರವನ್ನು ತುಂಬಿಸಿ ಬಲವಂತವಾಗಿ ಬಾಲಕನಿಗೆ ಕುಡಿಸಲು ಯತ್ನಿಸಿದ. ಬಳಿಕ ಮೂವರೂ ಸೇರಿ ಬಾಲಕನನ್ನು ಥಳಿಸಿ, ನಿಂದಿಸಿ ಬೆದರಿಕೆ ಹಾಕಿದರು.’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.