ADVERTISEMENT

ಪುದುಚೇರಿಯ ಇನ್ನೂ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ: ಬಿಜೆಪಿ

ಪಿಟಿಐ
Published 19 ಫೆಬ್ರುವರಿ 2021, 10:47 IST
Last Updated 19 ಫೆಬ್ರುವರಿ 2021, 10:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುದುಚೇರಿ: ಪುದುಚೇರಿಯ ಇನ್ನೂ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ. ವಿ.ನಾರಾಯಣಸ್ವಾಮಿ ಸರ್ಕಾರಕ್ಕೆ ವಿಶ್ವಾಸಮತ ಯಾಚನೆ ವೇಳೆ ಸೋಲಾಗಲಿದೆ ಎಂದು ಬಿಜೆಪಿ ನಾಯಕ ನಿರ್ಮಲ್ ಕುಮಾರ್ ಸುರಾನ ಹೇಳಿದ್ದಾರೆ.

ಈಗಾಗಲೇ ರಾಜೀನಾಮೆ ನೀಡಿರುವ ನಾಲ್ವರು ಶಾಸಕರ ಪೈಕಿ ಎ.ನಮಶಿವಾಯಂ ಹಾಗೂ ಇ ಥೀಪ್ಪೈನ್‌ತಾನ್ ಈಗಾಗಲೇ ಬಿಜೆಪಿ ಸೇರಿದ್ದಾರೆ.

ಇನ್ನಿಬ್ಬರು ಕಾಂಗ್ರೆಸ್ ಶಾಸಕರಾದ ಮಲ್ಲಾಡಿ ಕೃಷ್ಣ ರಾವ್ ಮತ್ತು ಎ. ಜಾನ್ ಕುಮಾರ್ ಸಹ ಬಿಜೆಪಿ ಸೇಲಿದ್ದಾರೆ. ಅವರು ನಮ್ಮ ನಾಯಕರೊಂದಿಗೆ ಮಾತುಕತೆಯಲ್ಲಿದ್ದಾರೆ ಎಂದು ಸುರಾನ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ವಿಶ್ವಾಸಮತ ಯಾಚನೆ ವೇಳೆ ಸೋಲಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ, ಶೇ 100ರಷ್ಟು ಕಾಂಗ್ರೆಸ್‌ ಸರ್ಕಾರ ಸೋಲುವುದು ಖಚಿತ’ ಎಂದು ಹೇಳಿದ್ದಾರೆ.

ಫೆ. 22ರಂದು ಸಂಜೆ 5 ಗಂಟೆಯ ಒಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ಡಾ. ತಮಿಳಿಸೈ ಸೌಂದರರಾಜನ್ ಅವರು ನಾರಾಯಣಸ್ವಾಮಿ ಸರ್ಕಾರಕ್ಕೆ ಈಗಾಗಲೇ ಸೂಚಿಸಿದ್ದಾರೆ.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಲಿರುವ ಮೂವರು ಶಾಸಕರ ಹೆಸರು ಬಹಿರಂಗಪಡಿಸಲು ಸುರಾನ ನಿರಾಕರಿಸಿದ್ದಾರೆ.

‘ಯಾರು ಎಂಬ ಬಗ್ಗೆ ನಾನೀಗ ಮಾತನಾಡಲಾರೆ. ಅವರು ನಾರಾಯಣಸ್ವಾಮಿ ಬಗ್ಗೆ ಅಸಮಾಧಾನ ಹೊಂದಿದ್ದು, ರಾಜೀನಾಮೆ ನೀಡಲು ಬಯಸಿದ್ದಾರೆ. ಅವರು ರಾಜೀನಾಮೆ ನೀಡುವುದು ಶೇ 100ರಷ್ಟು ನಿಜವಾಗಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.