ADVERTISEMENT

ಕೇಜ್ರಿವಾಲ್ ಪುತ್ರಿಗೆ ಹಣ ವಂಚನೆ: ಮೂವರ ಬಂಧನ

ಪಿಟಿಐ
Published 15 ಫೆಬ್ರುವರಿ 2021, 10:43 IST
Last Updated 15 ಫೆಬ್ರುವರಿ 2021, 10:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿಗೆ ಹಣ ವಂಚಿಸಿದ ಆರೋಪದಡಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ವಾರಿಸ್ (25) ತಲೆಮರೆಸಿಕೊಂಡಿದ್ದಾನೆ.

ಹರಿಯಾಣದ ಸಾಜಿದ್ (26), ಮಥುರಾದ ಕಪಿಲ್ (18) ಮತ್ತು ಮನ್ವಿಂದರ್ ಸಿಂಗ್ (25) ಬಂಧಿತರು. ತಾಂತ್ರಿಕ ಕಣ್ಗಾವಲು ನೆರವಿನಲ್ಲಿ ಇವರನ್ನು ಭರತ್‌ಪುರ–ಮಥುರಾ ಗಡಿಯಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಫಾ ಮಾರಾಟ ಕುರಿತು ಕೇಜ್ರಿವಾಲ್ ಅವರ ಪುತ್ರಿ ಇ–ಕಾಮರ್ಸ್ ವೇದಿಕೆಯಲ್ಲಿ ಮಾಹಿತಿ ಪ್ರಕಟಿಸಿದ್ದರು. ಖರೀದಿದಾರನ ಸೋಗಿನಲ್ಲಿ ಬಂಧಿತರಲ್ಲಿ ಒಬ್ಬ ಮುಖ್ಯಮಂತ್ರಿ ಪುತ್ರಿಗೆ ₹34 ಸಾವಿರ ವಂಚಿಸಿದ್ದ ಎಂದೂ ತಿಳಿಸಿದ್ದಾರೆ.

ADVERTISEMENT

ಬಂಧಿತ ಮೂವರು ಮುಖ್ಯ ಆರೋಪಿಗೆ ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಮನ್ವಿಂದರ್ ನಕಲಿ ದಾಖಲೆ ಸೃಷ್ಟಿಸಿ ಕಪಿಲ್, ಸಾಜಿದ್ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದು, ಈ ಮೂಲಕ ಕಮಿಷನ್ ಪಡೆಯುತ್ತಿದ್ದರು.

ಸಿ.ಎಂ ಪುತ್ರಿಯ ಬ್ಯಾಂಕ್‌ ಖಾತೆ ವಿವರಗಳು ಸರಿ ಇದೆಯಾ ಎಂಬುದರ ಖಾತರಿಗೆ ಮೊದಲು ಅಲ್ಪ ಮೊತ್ತವನ್ನು ವರ್ಗಾಯಿಸಿದ್ದರು. ಬಳಿಕ ಕ್ಯೂಆರ್ ಕೋಡ್ ಕಳುಹಿಸಿದ್ದು, ಸ್ಕ್ಯಾನ್ ಮಾಡುವ ಮೂಲಕ ಸೋಫಾ ಖರೀದಿ ಮೊತ್ತ ಪಡೆಯಲು ತಿಳಿಸಿದ್ದರು. ಬಳಿಕ ತಪ್ಪು ಕೋಡ್ ಕಳುಹಿಸಿದ್ದೆ ಎಂದು ಮತ್ತೊಮ್ಮೆ ಕೋಡ್ ಕಳುಹಿಸಿದ್ದರು. ಎರಡೂ ಬಾರಿ ಕ್ಲಿಕ್‌ ಮಾಡಿದ ಹಿಂದೆಯೇ ಅವರ ಖಾತೆಯಿಂದಲೇ ಹಣ ಕಡಿತವಾಗಿತ್ತು. ಈ ಕುರಿತ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.