ತ್ರಿಶೂರ್ ವನ್ಯಜೀವಿ ಉದ್ಯಾನ
ಚಿತ್ರ ಕೃಪೆ: ಎಕ್ಸ್
ತ್ರಿಶೂರ್: ಕೇರಳದ ತ್ರಿಶೂರ್ನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ವನ್ಯಜೀವಿ ಉದ್ಯಾನದಲ್ಲಿ 10 ಜಿಂಕೆಗಳು ಮೃತಪಟ್ಟಿದ್ದು, ಬೀದಿ ನಾಯಿಗಳ ದಾಳಿಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸೋಮವಾರ ರಾತ್ರಿ ಉದ್ಯಾನಕ್ಕೆ ನಾಯಿಗಳು ನುಗ್ಗಿ ದಾಳಿ ಮಾಡಿವೆ ಎನ್ನಲಾಗಿದ್ದು, ಈ ಘಟನೆ ಉದ್ಯಾನದ ಭದ್ರತೆಯ ಬಗ್ಗೆ ಕಳವಳ ಮೂಡಿಸಿದೆ.
ವನ್ಯಜೀವಿ ತಜ್ಞ ಡಾ.ಅರುಣ್ ಜಚಾರಿಯಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತ ಜಿಂಕೆಗಳ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಉದ್ಯಾನದ ನಿರ್ದೇಶಕ ನಾಗರಾಜ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
336 ಎಕರೆಯಲ್ಲಿರುವ ‘ತ್ರಿಶೂರ್ ವನ್ಯಜೀವಿ ಉದ್ಯಾನ’ಕ್ಕೆ ಅ.28ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಾಲನೆ ನೀಡಿದ್ದರು. ಈ ಉದ್ಯಾನದ ಪ್ರವೇಶಕ್ಕೆ ಸದ್ಯ ಶಾಲಾ, ಕಾಲೇಜಿನ ಮಕ್ಕಳಿಗೆ ಮಾತ್ರ ಅನುಮತಿಸಲಾಗಿದೆ.
ಉದ್ಯಾನದ ನೈಸರ್ಗಿಕ ಆವರಣಗಳಲ್ಲಿ 80 ಜಾತಿಗಳ 534 ಪ್ರಾಣಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಅಸ್ತಿತ್ವದಲ್ಲಿರುವ ತ್ರಿಶೂರ್ ಮೃಗಾಲಯದಿಂದ ಪ್ರಾಣಿಗಳನ್ನು ಹಂತ ಹಂತವಾಗಿ ಹೊಸ ಕ್ಯಾಂಪಸ್ಗೆ ಸ್ಥಳಾಂತರಿಸಲಾಗುತ್ತಿದೆ. ಉದ್ಯಾನದ ಬಳಿ ಇರುವ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.