ಅಗರ್ತಲಾ: ಕೇವಲ ಒಂದು ಕುಟುಂಬದ ಕೊಡುಗೆಗಷ್ಟೇ ಮಹತ್ವವನ್ನು ನೀಡಿದ್ದ ಇತಿಹಾಸವನ್ನು ತೆಗೆದುಹಾಕುವ ಸಮಯ ಬಂದಿದೆ. ಭಾರತದ ಇತಿಹಾಸಕ್ಕೆ ಮರು ಭೇಟಿ ನೀಡುವ ಸಮಯ ಇದಾಗಿದೆ ಎಂದು ತ್ರಿಪುರದ ಉಪಮುಖ್ಯಮಂತ್ರಿ ಜಿಷ್ಣುದೇವ್ ವರ್ಮಾ ಹೇಳಿದ್ದಾರೆ.
ಬುಧವಾರ, ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಷ್ಣುದೇವ್ ಅವರು, ಭಾರತ ಕೇವಲ ಒಂದು ಕುಟುಂಬದ ಕೊಡುಗೆಯಿಂದಷ್ಟೇ ಸ್ವಾತಂತ್ರ್ಯ ಪಡೆದಿಲ್ಲ. ಹಾಗೆಂದು ತಪ್ಪಾಗಿ ಹೇಳಿಕೊಟ್ಟಿದ್ದಾರೆ. ಸಾವಿರಾರು ಯುವಕ-ಯುವತಿಯರು ರಕ್ತವನ್ನು ಚೆಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಅಂತಿಮ ಗುರಿ ತಲುಪಿದ್ದಾರೆ ಎಂದರು.
ಪರೋಕ್ಷವಾಗಿ ಕಾಂಗ್ರೆಸ್ನ ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಟೀಕಿಸಿದ ಜಿಷ್ಣುದೇವ್, ಜನರಿಗೆ ಒಂದು ಕುಟುಂಬದ ಕೊಡುಗೆಯನ್ನಷ್ಟೇ ಅರಿತುಕೊಳ್ಳುವಂತೆ ಬಹಳ ಎಚ್ಚರಿಕೆ ವಹಿಸಲಾಗಿದೆ. ಶ್ಯಾಮ್ ಮುಖರ್ಜಿ ಅವರ ಕೊಡುಗೆಗಳ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ? ಎಂದು ಪ್ರಶ್ನಿಸಿದರು.
ಶ್ಯಾಮ್ ಮುಖರ್ಜಿ, ಸುಭಾಶ್ ಚಂದ್ರ ಬೋಸ್ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅನುಮಾನಸ್ಪದ ಸಾವಿನ ಕುರಿತು ಮಾತನಾಡಿದ ಜಿಷ್ಣುದೇವ್, ಸತ್ಯವನ್ನು ಕಂಡುಹಿಡಿಯಲಾಗದಿರುವುದು ಆ ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯ ಎಂದರು.
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಜಿಷ್ಣುದೇವ್, ಜನಸಂಘ ಸ್ಥಾಪಿಸಿದ ಮುಖರ್ಜಿ ಅವರಿಗೆ ಹುಟ್ಟೂರಲ್ಲಿ ಗೌರವ ನೀಡಿಲ್ಲ. ಕನಿಷ್ಠ ಹೂವಿನ ಹಾರವನ್ನು ಹಾಕಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.