ತಿರುಪತಿಯ ತಿರುಮಲದಲ್ಲಿ ಸ್ಥಾಪಿಸಿದ ಕೃತಕ ಬುದ್ಧಿಮತ್ತೆ ಆಧರಿತ ಕಮಾಂಡ್ ಸೆಂಟರ್ ಮುಂದೆ ಸಿಬ್ಬಂದಿ
– ಪ್ರಜಾವಾಣಿ ಚಿತ್ರ
ಹೈದರಾಬಾದ್: ವಿಶ್ವದ ಅತೀ ಶ್ರೀಮಂತ ಹಿಂದೂ ದೇವಾಲಯವಾದ ತಿರುಮಲದ ತಿಮ್ಮಪ್ಪನ ಸನ್ನಿಧಾನದಲ್ಲಿ ದೇಶದಲ್ಲೇ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಆಧರಿತ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ)ಗೆ ಚಾಲನೆ ನೀಡಲಾಗಿದೆ. ಪ್ರತಿ ಗಂಟೆಗೆ 4,500 ಮಂದಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದು, ಹೊಸ ಸೌಲಭ್ಯವು ಭಕ್ತಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಳತವಾಗಿದೆ.
ಅನಿವಾಸಿ ಭಾರತೀಯರು ನೀಡಿದ ದಾನದಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 6 ಸಾವಿರ ಎ.ಐ ನಿಗಾ ಕ್ಯಾಮೆರಾಗಳು ಕಮಾಂಡ್ ಕೇಂದ್ರಗಳಿಗೆ ನಿರಂತರ ಲೈವ್ ವಿಡಿಯೊ ರವಾನಿಸಲಿವೆ. ಇದರಿಂದ, ದಟ್ಟಣೆ ವೇಳೆ ಸರತಿಯ ಸಾಲು ನಿರ್ವಹಣೆಯ ಜೊತೆಗೆ ಕ್ಷಿಪ್ರವಾಗಿ ಸ್ಪಂದಿಸಲು ನೆರವಾಗಲಿದೆ.
ಐಸಿಸಿಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು,‘ಭಕ್ತಾದಿಗಳು ದೇವರ ದರ್ಶನ ಪಡೆಯಲು ಕಾಯುವ ಅವಧಿ ಇಳಿಸಲು ಟಿಟಿಡಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಪ್ರತಿ ತಾಸಿಗೆ 4,500 ಭಕ್ತಾದಿಗಳು ದರ್ಶನ ಪಡೆಯುತ್ತಿದ್ದು, ಇದನ್ನು 5,500ಕ್ಕೆ ಹೆಚ್ಚಿಸಬೇಕು’ ಎಂದು ಸೂಚಿಸಿದ್ದಾರೆ.
ತಿರುಪತಿಯ ತಿರುಮಲದಲ್ಲಿ ಸ್ಥಾಪಿಸಿದ ಕೃತಕ ಬುದ್ಧಿಮತ್ತೆ ಆಧರಿತ ಕಮಾಂಡ್ ಸೆಂಟರ್ ಮುಂದೆ ಸಿಬ್ಬಂದಿ
‘ತಿರುಮಲಕ್ಕೆ ಮದ್ಯ ಹಾಗೂ ನಿಷೇಧಿತ ವಸ್ತುಗಳು ಒಳಪ್ರವೇಶಿಸದಂತೆ ಅಲಿಪ್ಪಿರಿಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಕಮಾಂಡ್ ಕೇಂದ್ರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ದಟ್ಟಣೆ ಉಂಟಾದ ಸಂದರ್ಭದಲ್ಲಿಯೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ, ತಿರುಮಲದಲ್ಲಿ ಶೇಕಡಾ 90ರಷ್ಟು ಹಸಿರು ವೃದ್ಧಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
2024ರಲ್ಲಿ ಅಮೆರಿಕದ ಸಿಲಿಕಾನ್ ವ್ಯಾಲಿಗೆ ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ಸಚಿವ ನಾರಾ ಲೋಕೇಶ್ ಭೇಟಿ ನೀಡಿದ್ದ ವೇಳೆ ತಿರುಮಲದಲ್ಲಿ ಭಕ್ತರ ದಟ್ಟಣೆ ನಿಯಂತ್ರಿಸಲು ಎ.ಐ ಆಧರಿತ ತಂತ್ರಜ್ಞಾನ ಅಳವಡಿಸುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.