ADVERTISEMENT

ಶವಗಳನ್ನು ಮುಂದಿಟ್ಟುಕೊಂಡು ಮಮತಾ ಬ್ಯಾನರ್ಜಿ ರಾಜಕೀಯ: ಪ್ರಧಾನಿ ಮೋದಿ ಟೀಕೆ

ಪಿಟಿಐ
Published 17 ಏಪ್ರಿಲ್ 2021, 9:35 IST
Last Updated 17 ಏಪ್ರಿಲ್ 2021, 9:35 IST
ನರೇಂದ್ರ ಮೋದಿ (ಪಿಟಿಐ ಚಿತ್ರ)
ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಪಶ್ಷಿಮ ಬಂಗಾಳದ ಮೊದಲ ನಾಲ್ಕು ಹಂತಗಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಒಡೆದುಹೋಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶವಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಆಸಾನ್‌ಸೋಲ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮತದಾನದ ಕೊನೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯನಿಗೆ ಸೋಲಾಗಲಿದೆ ಎಂದಿದ್ದಾರೆ.

ಶವಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಹಳೆಯ ಚಾಳಿಯನ್ನು ಟಿಎಂಸಿ ಮುಖ್ಯಸ್ಥೆ ಈಗ ಮುಂದುವರಿಸಿದ್ದಾರೆ. ಕೂಚ್‌ ಬಿಹಾರ್‌ ಜಿಲ್ಲೆಯ ಸೀತಾಲಕುಚಿಯಲ್ಲಿ ದುರದೃಷ್ಟವಶಾತ್ ಮೃತಪಟ್ಟ ಐವರ ಸಾವಿಗೆ ರಾಜಕೀಯ ಬಣ್ಣ ಬಳಿಯಲು ಮಮತಾ ಯತ್ನಿಸುತ್ತಿದ್ದಾರೆ ಎಂದು ಮೋದಿ ದೂರಿದ್ದಾರೆ.

ನಾಲ್ಕು ಹಂತಗಳ ಮತದಾನದ ಬಳಿಕ ಟಿಎಂಸಿ ಒಡೆದುಹೋಗಿದೆ. 8 ಹಂತಗಳ ಮತದಾನ ಪೂರ್ಣಗೊಂಡ ಬಳಿಕ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಅವರು ಹೇಳಿದ್ದಾರೆ.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣವನ್ನೂ ಉಲ್ಲೇಖಿಸಿದ ಪ್ರಧಾನಿ, ಮಮತಾ ಹಾಗೂ ಅಭಿಷೇಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಸಾನ್‌ಸೋಲ್‌ನಲ್ಲಿ ಏಳನೇ ಹಂತದಲ್ಲಿ, ಏಪ್ರಿಲ್ 26ರಂದು ಮತದಾನ ನಡೆಯಲಿದೆ.

ಪಕ್ಷವನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರುವ ಗುರಿಯೊಂದಿಗೆ ಮಮತಾ ಮತ್ತು ಅವರ ಸೋದರಳಿಯ ಅಭಿಷೇಕ್ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.