ಕೋಲ್ಕತ್ತ: ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಗ್ರಹಿಸಿದೆ.
ಹಲ್ದಿಯಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿಯೂ ಸುವೇಂದು ಹೆಸರಿದೆ. ಹೀಗಾಗಿ ಅವರ ಉಮೇದುವಾರಿಕೆ ರದ್ದುಗೊಳಿಸಬೇಕು ಎಂದು ಟಿಎಂಸಿ ಹೇಳಿದೆ.
ಈ ವಿಚಾರವಾಗಿ ನಂದಿಗ್ರಾಮದ ಚುನಾವಣಾ ನೋಂದಣಿ ಅಧಿಕಾರಿಗೆ ಟಿಎಂಸಿ ರಾಜ್ಯಸಭೆ ಸದಸ್ಯ ಡೆರೆಕ್ ಒ'ಬ್ರಿಯಾನ್ ಪತ್ರ ಬರೆದಿದ್ದಾರೆ. ಹಲ್ದಿಯಾ ಮತ್ತು ನಂದಿಗ್ರಾಮ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಸುವೇಂದು ಅಧಿಕಾರಿ ಹೆಸರಿದೆ. 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಈ ನಿಯಮದ ಪ್ರಕಾರ, ಒದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದುವಂತಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಸುವೇಂದು ಅಧಿಕಾರಿಯವರು ತಮ್ಮ ನಿವಾಸದ ಕುರಿತ ಸುಳ್ಳು ವಿವರಗಳನ್ನು ನೀಡುವ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹಲ್ದಿಯಾ ವಿಧಾನಸಭಾ ಕ್ಷೇತ್ರದಿಂದ ನಂದಿಗ್ರಾಮಕ್ಕೆ ವರ್ಗಾಯಿಸಲು ಅರ್ಜಿ ಸಲ್ಲಿಸಿದ್ದರು ಎಂದೂ ಒ'ಬ್ರಿಯಾನ್ ಆರೋಪಿಸಿದ್ದಾರೆ.
ಬೂತ್ ಮಟ್ಟದ ಅಧಿಕಾರಿಯು ದೃಢೀಕರಣಕ್ಕಾಗಿ ಭೇಟಿ ನೀಡಿದ್ದಾಗ ಅಧಿಕಾರಿ ಗೈರಾಗಿದ್ದರು ಎಂದೂ ಅವರು ಹೇಳಿದ್ದಾರೆ.
ಸುವೇಂದು ಅಧಿಕಾರಿಯವರು ನಂದಿಗ್ರಾಮ ವ್ಯಾಪ್ತಿಯಲ್ಲಿರುವ ನಂದನಾಯಕ್ಬಾರ್ ಗ್ರಾಮದಲ್ಲಿ ಕಳೆದ 6 ತಿಂಗಳುಗಳಿಂದ ವಾಸವಾಗಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.