ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್ ಅವರನ್ನು ಶುಕ್ರವಾರದಿಂದ ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ಶಂತನು ಸೇನ್ ಅವರನ್ನು ಅಮಾನತುಗೊಳಿಸುವಂತೆ ರಾಜ್ಯಸಭೆಯಲ್ಲಿಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಮಂಡಿಸಿದ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ನಂತರ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಸದನವನ್ನು ತೊರೆಯುವಂತೆ ಸೇನ್ ಅವರನ್ನು ಕೇಳಿದರು.
ರಾಜ್ಯಸಭೆಯಲ್ಲಿ ಗುರುವಾರ ನಡೆದ ಕಲಾಪದಲ್ಲಿ ಶಂತನು ಸೇನ್ ಅವರು ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವ ಅಶ್ವಿನಿ ವೈಷ್ಣವ್ ಅವರ ಕೈಯಲ್ಲಿದ್ದ ಹೇಳಿಕೆಯ ಪ್ರತಿಯನ್ನು ಕಿತ್ತುಕೊಂಡಿದ್ದರು. ನಂತರ ಬಾವಿಗಿಳಿದು ಅದನ್ನು ಹರಿದು ಬಿಸಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಧಿವೇಶನದಿಂದ ಅಮಾನತು ಮಾಡಬೇಕೆಂದು ಸರ್ಕಾರ ನಿರ್ಣಯ ಮಂಡಿಸಿತ್ತು.
ಇದನ್ನೂ ಓದಿ: ಲೋಕಸಭೆ ಕಲಾಪ: ಜು.26ರ ವರೆಗೂ ಮುಂದೂಡಿಕೆ
ಶುಕ್ರವಾರದ ಕಲಾಪದ ಚರ್ಚೆಯ ವಿಷಯಗಳ ಪಟ್ಟಿಯಲ್ಲಿ ನಿರ್ಣಯ ಕುರಿತು ಪ್ರಸ್ತಾಪಿಸದೇ ಏಕಾಏಕಿ ಅನುಮೋದನೆ ನೀಡಲಾಗಿದೆ ಎಂದು ಆರೋಪಿಸಿ ಟಿಎಂಸಿ ಸಂಸದರು ಪ್ರತಿಭಟನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.