ADVERTISEMENT

ಪೊಲೀಸರ ದೌರ್ಜನ್ಯ ಆರೋಪ: ಕೇಂದ್ರ ಗೃಹ ಸಚಿವಾಲಯದ ಎದುರು ಟಿಎಂಸಿ ಸಂಸದರ ಧರಣಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 10:27 IST
Last Updated 22 ನವೆಂಬರ್ 2021, 10:27 IST
   

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿ ಭೇಟಿಗೂ ಮುನ್ನ ಟಿಎಂಸಿ ಸಂಸದರ ನಿಯೋಗ ಕೇಂದ್ರ ಗೃಹ ಸಚಿವಾಲಯದ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ.

ತ್ರಿಪುರಾದಲ್ಲಿ ಪೊಲೀಸರು ಟಿಎಂಸಿ ನಾಯಕರ ಮೇಲೆದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿರುವ ಸಂಸದರು, ಈ ಕುರಿತು ಮಾತುಕತೆ ನಡೆಸಲು ಅಮಿತ್ ಶಾ ಅವರ ಭೇಟಿಗೆ ಅವಕಾಶ ಕೋರಿ ಈ ಧರಣಿ ನಡೆಸುತ್ತಿದ್ದಾರೆ.

ನಿಯೋಗದಲ್ಲಿ ಸಂಸದರಾದ ಡೆರೆಕ್ ಓಬ್ರಿಯಾನ್, ಸುಖೇಂದು ಶೇಖರ್ ರಾಯ್, ಕಲ್ಯಾಣ್ ಬ್ಯಾನರ್ಜಿ, ಸೌಗತಾ ರಾಯ್, ದೊಲಾ ಸೇನ್ ಇದ್ದರು.

ADVERTISEMENT

ಬಿಜೆಪಿ ವಿರೋಧಿ ಬಣ ಕಟ್ಟುವ ನಿಟ್ಟಿನಲ್ಲಿ ವಿವಿಧ ಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸಲು ಇಂದು ಮಮತಾ ಬ್ಯಾನರ್ಜಿ ದೆಹಲಿ ಭೇಟಿ ನಿಗದಿಯಾಗಿದೆ.

ಈ ಮಧ್ಯೆ, ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಹ ಭೇಟಿ ಮಾಡುವ ಸಾಧ್ಯತೆ ಇದ್ದು, ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮತ್ತು ಬಿಎಸ್ಎಫ್ ಕಾರ್ಯಾಚರಣೆ ವ್ಯಾಪ್ತಿ ಹೆಚ್ಚಳ ಕುರಿತಂತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ನವೆಂಬರ್ 25ರಂದು ನಡೆಯಲಿರುವ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಶನ್ ಸೇರಿ 12 ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ಟಿಎಂಸಿ ನಾಯಕರ ಮೇಲೆ ಹಲ್ಲೆ ಆರೋಪ ಮತ್ತು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಅವರ ಸಭೆಯಲ್ಲಿ ಗದ್ದಲಕ್ಕೆ ಕಾರಣವಾದ ಆರೋಪದಡಿ ಟಿಎಂಸಿ ಯುವ ಘಟಕದ ಅಧ್ಯಕ್ಷರಾದ ಸಾಯೊನಿ ಘೋಷ್ ಬಂಧನ ಖಂಡಿಸಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.