ಚೆನ್ನೈ: ಈಶಾನ್ಯ ಮುಂಗಾರು ಮಳೆ ಆರಂಭವಾಗಿದ್ದು, ಕರ್ನಾಟಕದ ದಕ್ಷಿಣ ಒಳನಾಡು ಸೇರಿ ದಕ್ಷಿಣ ಭಾರತದಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.
ಈ ಭಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಸೈಕ್ಲೋನ್ ಮುನ್ನೆಚ್ಚರಿಕೆ ಕೇಂದ್ರದ ನಿರ್ದೇಶಕ ಎಸ್.ಬಾಲಚಂದ್ರನ್ ಅವರು ಹೇಳಿದ್ದಾರೆ.
‘ಈಶಾನ್ಯ ಮುಂಗಾರು ಮಳೆಯು ತಮಿಳುನಾಡು, ಪುದುಚೇರಿಯ ಕರಾವಳಿ ಭಾಗ, ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಹಾಗೂ ಆಂಧ್ರದ ದಕ್ಷಿಣ ಕರಾವಳಿಯಲ್ಲಿ ಈಗಾಗಲೇ ಆರಂಭವಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನ ಪುಳಾಲ್ನಲ್ಲಿ 11 ಸೆಂ.ಮೀ ಹಾಗೂ ಕೇಳಂಬಾಕಂನಲ್ಲಿ 10 ಸೆಂ. ಮೀ. ಮಳೆ ಸುರಿದಿದೆ.
ಕರ್ನಾಟಕದ ಒಳನಾಡು, ತಮಿಳುನಾಡು, ಕೇರಳ, ರಾಯಲಸೀಮೆಯ ಉಳಿದ ಭಾಗಗಳಲ್ಲಿ ಶುಕ್ರವಾರ ಮಳೆಯಾಗಲಿದೆ. ಈಶಾನ್ಯ ಮಾರುತಗಳ ಮೇಲೆ ತಮಿಳುನಾಡು ಹೆಚ್ಚು ಅವಲಂಬಿತವಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ತಮಿಳುನಾಡಿನಲ್ಲಿ 44 ಸೆಂ.ಮೀ ವಾಡಿಕೆ ಮಳೆಯಾಗುತ್ತದೆ. ಈ ಬಾರಿ ಇದು ಅಧಿಕವಾಗುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.