ಚೆನ್ನೈ: 21 ವರ್ಷದ ಕಾಲೇಜು ವಿದ್ಯಾರ್ಥಿಯ ಶವವನ್ನು ಹೂತಿಟ್ಟ ಆರೋಪದ ಮೇಲೆ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ 10ನೇ ತರಗತಿ ಇಬ್ಬರು ವಿದ್ಯಾರ್ಥಿನಿಯರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಈಚಿಂಗಾಡು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ರಕ್ತಸಿಕ್ತ ಹಲ್ಲು ಮತ್ತು ಕೂದಲು ಇರುವ ಬಗ್ಗೆ ಸ್ಥಳೀಯರು ತಿರುವಳ್ಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಹೂತಿದ್ದ ಶವ ಪತ್ತೆಯಾಗಿದೆ.
ತನಿಖೆಯ ವೇಳೆ ಪೊಲೀಸರಿಗೆ ಸಂತ್ರಸ್ತನ ಮೊಬೈಲ್ ಫೋನ್ ಸಿಕ್ಕಿರುವುದರಿಂದಾಗಿ ಚೆಂಗಾಲಪಟ್ಟು ಜಿಲ್ಲೆಯಲ್ಲಿನ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಸುಳಿವು ಪತ್ತೆಯಾಗಿದೆ. ಬಾಲಕಿಯರನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರೇಮ್ ಕುಮಾರ್ ತಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿದ್ದದ್ದಾಗಿ ತಿಳಿಸಿದ್ದಾರೆ. ಆತ ಒಬ್ಬರಿಗೊಬ್ಬರಿಗೆ ತಿಳಿಯದಂತೆ ಇಬ್ಬರೊಂದಿಗೂ ಸಂಬಂಧ ಹೊಂದಿದ್ದ. ಬಾಲಕಿಯರ ಜೊತೆ ಆಕ್ಷೇಪಾರ್ಹ ಫೋಟೊಗಳನ್ನು ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸುತ್ತಿದ್ದ. ಅಲ್ಲದೆ ಇಬ್ಬರಿಂದಲೂ 50 ಸಾವಿರ ರೂಪಾಯಿಯನ್ನು ಸುಲಿಗೆ ಮಾಡಿದ್ದ ಎನ್ನಲಾಗಿದೆ.
ಬಳಿಕ ಇಬ್ಬರೊಂದಿಗೂ ಪ್ರೇಮ್ಕುಮಾರ್ ಸಂಬಂಧ ಹೊಂದಿರುವುದು ತಿಳಿದಿದೆ ಮತ್ತು ಆತನಿಂದ ಬೇಡಿಕೆಯಿಟ್ಟದ್ದ ಹಣವನ್ನು ಒದಗಿಸಲು ಆಗಿರಲಿಲ್ಲ. ಬಳಿಕ ಅವರಿಬ್ಬರೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಿತನಾಗಿದ್ದ ಅಶೋಕ್ ಎಂಬಾತನ ಸಹಾಯ ಕೇಳಿದ್ದಾರೆ ಮತ್ತು ತಾವು ಅನುಭವಿಸುತ್ತಿರುವ ತೊಂದರೆಯನ್ನು ವಿವರಿಸಿದ್ದಾರೆ.
ಅಶೋಕ್ ನೀಡಿದ ಸಲಹೆ ಮೇರೆಗೆ ಬಾಲಕಿಯರು ಪ್ರೇಮ್ಕುಮಾರ್ಗೆ ಕರೆ ಮಾಡಿ ಶೋಲವರಮ್ ಟೋಲ್ ಪ್ಲಾಜಾ ಬಳಿ ಬರಲು ಹೇಳಿದ್ದಾರೆ. ಬಳಿಕ ಆತನನ್ನು ಅಪಹರಿಸಲಾಗಿದೆ.
ಬಾಲಕಿಯರಿಬ್ಬರೂ ಪ್ರೇಮ್ಕುಮಾರ್ ಬಳಿಯಿರುವ ಮೊಬೈಲ್ ಕಸಿದುಕೊಂಡು ಅದರಲ್ಲಿರುವ ಫೋಟೊಗಳನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಅಶೋಕ್ ಮತ್ತು ಅವನ ಸ್ನೇಹಿತರು ಪ್ರೇಮ್ಕುಮಾರ್ನನ್ನು ಅಪಹರಿಸಿ ಈಚಂಗಾಡು ಗ್ರಾಮಕ್ಕೆ ಕಲೆದೊಯ್ದು ಹತ್ಯೆ ಮಾಡಿದ್ದಾರೆ ಮತ್ತು ಅಲ್ಲಿಯೇ ಸಮಾಧಿ ಮಾಡಿದ್ದಾರೆ.
ಪೊಲೀಸರು ತಲೆಮರೆಸಿಕೊಂಡಿರುವ ಅಶೋಕ್ ಮತ್ತು ಅವನ ಸ್ನೇಹಿತರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.