ADVERTISEMENT

ಕೊಡನಾಡು ಬಂಗಲೆ ದರೋಡೆ, ಕೊಲೆ ಪ್ರಕರಣದಲ್ಲಿ ಶಶಿಕಲಾ ವಿಚಾರಣೆ 

ಪಿಟಿಐ
Published 21 ಏಪ್ರಿಲ್ 2022, 10:51 IST
Last Updated 21 ಏಪ್ರಿಲ್ 2022, 10:51 IST
ವಿ.ಕೆ ಶಶಿಕಲಾ
ವಿ.ಕೆ ಶಶಿಕಲಾ    

ಚೆನ್ನೈ: ನೀಲಗಿರಿಯ ‘ಕೊಡನಾಡು ಬಂಗಲೆ’ಯಲ್ಲಿ2017ರಲ್ಲಿ ನಡೆದ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆಪ್ತೆ, ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ. ಕೆ. ಶಶಿಕಲಾ ಅವರನ್ನು ಪೊಲೀಸರ ತಂಡ ಗುರುವಾರ ವಿಚಾರಣೆಗೆ ಒಳಪಡಿಸಿದೆ.

ಕೊಡನಾಡು ಬಂಗಲೆಯನ್ನು ಜಯಲಲಿತಾ ಅವರು ವಿಶ್ರಾಂತಿಗಾಗಿ ಬಳಸುತ್ತಿದ್ದರು. 2016ರ ಡಿಸೆಂಬರ್‌ನಲ್ಲಿ ಸಂಭವಿಸಿದ ಜಯಲಲಿತಾ ಅವರ ಮರಣಾ ನಂತರ ಬಂಗಲೆಯಲ್ಲಿ ದರೋಡೆ ನಡೆದಿತ್ತು. ಆಗ ಮಹತ್ವದ ದಾಖಲೆಗಳು ಕಣ್ಮರೆಯಾಗಿದ್ದವು. ಅಲ್ಲದೆ, ಬಂಗಲೆಯ ಭದ್ರತಾ ಸಿಬ್ಬಂದಿಯ ಹತ್ಯೆಯಾಗಿತ್ತು. ಹೀಗಾಗಿ ‘ಕೊಡನಾಡು ಬಂಗಲೆ’ ಪ್ರಕರಣ ತಮಿಳುನಾಡಿನಲ್ಲಿ ಬಹುಚರ್ಚಿತ ವಿಷಯ.

ಗುರುವಾರ, ತಮಿಳುನಾಡು ಪಶ್ಚಿಮ ವಲಯದ ಐಜಿ ಆರ್ ಸುಧಾಕರ್ ನೇತೃತ್ವದ ಅಧಿಕಾರಿಗಳ ತಂಡವು ಚೆನ್ನೈನ ಶಶಿಕಲಾ ಅವರ ನಿವಾಸದಲ್ಲಿ ವಿಚಾರಣೆ ನಡೆಸಿತು. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಶಿಕಲಾ ಭರವಸೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.‘ಬಂಗಲೆಗೆ ಕೊನೆಯಾದಾಗಿ ಯಾವಾಗ ಭೇಟಿ ನೀಡಲಾಗಿತ್ತು, ಅಲ್ಲಿ ಇಟ್ಟಿದ್ದ ದಾಖಲೆಗಳು ಮತ್ತು ನಗದು, ಅಪಘಾತದಲ್ಲಿ ಮೃತಪಟ್ಟಚಾಲಕ ಕನಕರಾಜ್ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಶಶಿಕಲಾ ಅವರನ್ನು ಪ್ರಶ್ನಿಸಲಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

2017ರ ಎಪ್ರಿಲ್‌ನಲ್ಲಿನೀಲಗಿರಿ ಜಿಲ್ಲೆಯ ಕೊಡನಾಡ್ ಎಸ್ಟೇಟ್‌ನಲ್ಲಿ ದರೋಡೆ, ಕೊಲೆ ನಡೆದ ಐದು ದಿನಗಳ ನಂತರ ಜಯಲಲಿತಾ ಅವರ ಕಾರು ಚಾಲಕ ಕನಕರಾಜ್ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು. ಈಪ್ರಕರಣದಲ್ಲಿ ಸೇಲಂ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೊಡನಾಡು ಬಂಗಲೆ ಪ್ರಕರಣ ಅತ್ಯಂತ ದುರದೃಷ್ಟಕರ ಎಂದು ಶಶಿಕಲಾ ಹೇಳಿರುವುದಾಗಿಯೂ,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿರುವುದಾಗಿಯೂ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.