ADVERTISEMENT

ತಮಿಳುನಾಡು: ಮೇಕೆದಾಟು ಯೋಜನೆ ವಿರೋಧಿಸಿ ರೈತರ ಪ್ರತಿಭಟನೆ

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಕಾಯಂ ಅಧ್ಯಕ್ಷ ನೇಮಕಕ್ಕೆ ಒತ್ತಾಯ

ಪಿಟಿಐ
Published 17 ಜುಲೈ 2021, 14:24 IST
Last Updated 17 ಜುಲೈ 2021, 14:24 IST
ಮೇಕೆದಾಟು
ಮೇಕೆದಾಟು   

ತಂಜಾವೂರು: ರಾಮನಗರ ಜಿಲ್ಲೆಯ ಮೇಕೆದಾಟುವಿನಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆಯನ್ನು ವಿರೋಧಿಸಿ ತಮಿಳುನಾಡಿನ ಕಾವೇರಿ ನದಿ ತೀರದ ಪ್ರದೇಶಗಳ ರೈತರು ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದವು.

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯವನ್ನು ನಿರ್ಮಿಸುವ ಪ್ರಯತ್ನದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಯೋಜನೆ ಕುರಿತು ವಿವರವಾದ ವರದಿ ಸಿದ್ಧಪಡಿಸಲು ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನೀಡಿರುವ ಅನುಮತಿಯನ್ನು ಖಂಡಿಸಿದರು.

ಅಣೆಕಟ್ಟು ಯೋಜನೆಯನ್ನು ತಡೆಯಲು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಬೇಕು. ಅಂತೆಯೇ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಕಾಯಂ ಅಧ್ಯಕ್ಷರನ್ನೂ ನೇಮಕ ಮಾಡಬೇಕೆಂದು ಪ್ರತಿಭಟನನಿರತರು ಒತ್ತಾಯಿಸಿದರು.

ADVERTISEMENT

ಕಾವೇರಿ ನದಿ ತೀರದ 13 ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯಿತು. ಸಿಪಿಐ(ಎಂ)ನ ಅಂಗಸಂಸ್ಥೆಯಾದ ರೈತ ಸಂಘ, ತಮಿಳುನಾಡು ವಿವೈಸಗಲ್ ಸಂಘಂ, ಕೃಷಿ ಕಾರ್ಮಿಕರ ಸಂಘ, ಅಖಿಲ ಭಾರತ ವ್ಯವಸಾಯ ತೊಜಿಲಲರ್ ಸಂಘಂ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು. ಪಿ.ಆರ್. ಪಾಂಡಿಯನ್ ನೇತೃತ್ವದ ತಮಿಳುನಾಡು ಕಾವೇರಿ ವಿವೈಸಗಲ್ ರೈತ ಸಂಘವು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿತ್ತು.

ರಾಜಭವನ ಮುತ್ತಿಗೆ: ‘ಜುಲೈ 26ರಂದು ಮೇಕೆದಾಟು ಯೋಜನೆ ವಿರೋಧಿಸಿ ನಮ್ಮ ಸಂಘಟನೆ ವತಿಯಿಂದ ರಾಜಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕಾವೇರಿ ವಿವೈಸಗಲ್ ರೈತ ಸಂಘ ನಾಯಕ ಪಿ.ಆರ್. ಪಾಂಡಿಯನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.