ADVERTISEMENT

ಇಂದು ನನ್ನ ಪುತ್ರಿ, ನಾಳೆ ನಾನು...: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ತಂದೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 6:56 IST
Last Updated 6 ಜನವರಿ 2020, 6:56 IST
ಜೆಎನ್‌ಯು ವಿವಿ ವಿದ್ಯಾರ್ಥಿಗಳ ಮೇಲೆ ದಾಳಿ ಹಿನ್ನೆಲೆ ಹೆಚ್ಚುವರಿ ಭದ್ರತಾ ಪಡೆ ನಿಯೋಜನೆ
ಜೆಎನ್‌ಯು ವಿವಿ ವಿದ್ಯಾರ್ಥಿಗಳ ಮೇಲೆ ದಾಳಿ ಹಿನ್ನೆಲೆ ಹೆಚ್ಚುವರಿ ಭದ್ರತಾ ಪಡೆ ನಿಯೋಜನೆ   

ನವದೆಹಲಿ: ಘಟನೆಯಿಂದಾಗಿ ನನಗೆ ಭಯವಾಗಿದೆ. ದೇಶಾದ್ಯಂತ ಪರಿಸ್ಥಿತಿಯು ಹದಗೆಟ್ಟಿದ್ದು, ನಾಳೆ ನನ್ನ ಮೇಲೂ ದಾಳಿಯಾಗಬಹುದೆಂದು ದಾಳಿಗೊಳಗಾದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷ್‌ ಘೋಷ್‌ ಅವರ ತಂದೆ ಆತಂಕ ವ್ಯಕ್ತಪಡಿಸಿದ್ದಾರೆ.ಘಟನೆ ಸಂಬಂಧ ಕುಲಪತಿಗಳು ರಾಜೀನಾಮೆ ನೀಡಬೇಕು ಮತ್ತು ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ನನ್ನ ಪುತ್ರಿಯನ್ನು ಕೇಳುವುದಿಲ್ಲ ಎಂದು ಘೋಷ್ ತಾಯಿ ಹೇಳಿದ್ದಾರೆ.

ಇಡೀ ದೇಶಾದ್ಯಂತ ಪರಿಸ್ಥಿತಿಯು ಹದಗೆಟ್ಟಿದೆ. ನಮಗೆ ಭಯವಾಗಿದೆ. ಇಂದು ನನ್ನ ಪುತ್ರಿಯ ಮೇಲೆ ದಾಳಿಯಾಗಿದೆ. ನಾಳೆ ಮತ್ತೆ ಇನ್ಯಾರದ್ದೋ ಮೇಲೆ ದಾಳಿಯಾಗಬಹುದು. ಯಾರಿಗೆ ಗೊತ್ತು, ನಾಳೆ ನನ್ನ ಮೇಲೆ ಕೂಡ ದಾಳಿಯಾಗಬಹುದು ಎಂದು ಐಷ್ ಘೋಷ್ ಅವರ ತಂದೆ ಆತಂಕ ವ್ಯಕ್ತಪಡಿಸಿದ್ದಾರೆ.

ದಾಳಿ ಬಳಿಕ ಆಕೆಯೊಂದಿಗೆ ನೇರವಾಗಿ ಮಾತನಾಡಲು ಆಗಿಲ್ಲ. ಆದರೆ ಇತರರು ಹಿಂಸಾಚಾರದ ಘಟನೆ ಕುರಿತು ತಿಳಿಸಿದ್ದಾರೆ. ನನ್ನ ಮಗಳ ತಲೆಗೆ ಐದು ಹೊಲಿಗೆಗಳನ್ನು ಹಾಕಲಾಗಿದೆ. ನಮಗೆ ಆತಂಕವಾಗಿದೆ. ಎಡಪಂಥೀಯರು ಎಲ್ಲೆಡೆ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ. ಆಕೆಯು ಎಡಪಂಥೀಯ ಚಳವಳಿಯಲ್ಲಿ ಗುರುತಿಸಿಕೊಂಡಿದ್ದಳು. ಎಡಪಂಥದ ಚಳುವಳಿಯನ್ನು ಎಲ್ಲೆಡೆಯೂ ಹತ್ತಿಕ್ಕಲಾಗುತ್ತಿದೆ ಎಂದರು.

ಐಷ್ ಘೋಷ್ ಅವರ ತಾಯಿ ಮಾತನಾಡಿ, ವಿಸಿಯವರು ಈ ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಅವರು ಮಾತುಕತೆ ನಡೆಸಿಲ್ಲ. ಯಾವುದೇ ಕಾರಣಕ್ಕೂ ನನ್ನ ಪುತ್ರಿಯನ್ನು ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ನಾನು ಕೇಳುವುದಿಲ್ಲ. ಪ್ರತಿಭಟನೆಯಲ್ಲಿ ಹಲವಾರು ಯುವಕ ಮತ್ತು ಯುವತಿಯರು ಆಕೆಯೊಂದಿಗೆ ಇದ್ದರು. ಅವರೆಲ್ಲರೂ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಯುವಕ, ಯುವತಿಯರ ಗುಂಪೊಂದು ಜೆಎನ್‌ಯು ಕ್ಯಾಂಪಸ್‌ನೊಳಗೆ ನುಗ್ಗಿ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳನ್ನು ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ಚೆನ್ನಾಗಿ ಥಳಿಸಿದ್ದಾರೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.