ನವದೆಹಲಿ: ಲೋಕಸಭೆಯ ಅಂಗೀಕಾರ ಪಡೆದಿರುವ ತ್ರಿವಳಿ ತಲಾಖ್ ನಿಷೇಧ ಮಸೂದೆ ಸೋಮವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ.
ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸದನದಲ್ಲಿ ಹಾಜರಿರುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಸಂಸದರಿಗೆ ವಿಪ್ ಜಾರಿಗೊಳಿಸಿವೆ.
ಸದ್ಯ ಸ್ವರೂಪದಲ್ಲಿ ಮಸೂದೆ ಜಾರಿಯಾಗಲು ಅವಕಾಶ ನಿಡುವುದಿಲ್ಲ. ರಾಜ್ಯಸಭೆಯ ಅಂಗೀಕಾರ ದೊರೆಯದಂತೆ ನೋಡಿಕೊಳ್ಳುವುದಾಗಿ ಕಾಂಗ್ರೆಸ್ ಸವಾಲು ಹಾಕಿದೆ.
ವಿರೋಧ ಪಕ್ಷಗಳಿಗೆ ಹೋಲಿಸಿದರೆ ರಾಜ್ಯಸಭೆಯಲ್ಲಿ ಆಡಳಿತರೂಢ ಬಿಜೆಪಿ ಸದಸ್ಯರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಪಡೆಯಲು ಸರ್ಕಾರ ಸಾಹಸ ಮಾಡಬೇಕಿದೆ.
ಪೌರತ್ವ ಮಸೂದೆ ಅನುಮಾನ: ಚಳಿಗಾಲ ಅಧಿವೇಶನದಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡಿಸುವುದು ಅನುಮಾನ ಎಂದು ಹೇಳಲಾಗಿದೆ. ಜನವರಿ 8ರಂದು ಚಳಿಗಾಲ ಅಧಿವೇಶನ ಕೊನೆಗೊಳ್ಳಲಿದೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ 1955 ಇನ್ನೂ ಜಂಟಿ ಸಂಸದೀಯ ಸಮಿತಿ ಪರಿಶೀಲನೆಯಲ್ಲಿದೆ.
ಸೋಮವಾರ ಸಭೆ ಸೇರಲಿರುವ ಜೆಪಿಸಿ ತಿದ್ದುಪಡಿ ಮಸೂದೆಯನ್ನು ಅಂತಿಮಗೊಳಿಸಬೇಕಿದೆ.ಹೀಗಾಗಿ ಮಸೂದೆ ಮಂಡನೆಯಾಗುವುದು ಅನುಮಾನ ಎನ್ನಲಾಗಿದೆ. ಭಾರತದಲ್ಲಿ ಆರು ವರ್ಷ ವಾಸವಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನದ ಹಿಂದೂ, ಕ್ರೈಸ್ತರು, ಪಾರ್ಸಿ, ಜೈನ್, ಸಿಖ್ ಮತ್ತು ಬೌದ್ಧ ಧರ್ಮಿಯರಿಗೆ ಭಾರತೀಯ ಪೌರತ್ವ ನೀಡಲಿದೆ. ಇಲ್ಲಿಯವರೆಗೆ 12 ವರ್ಷ ವಾಸಿಸುವುದು ಕಡ್ಡಾಯವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.