ADVERTISEMENT

ರಾಜಸ್ಥಾನ | ಹಿಂಸೆಗೆ ತಿರುಗಿದ ಟ್ರಕ್‌ ಚಾಲಕರ ಪ್ರತಿಭಟನೆ: ಮೂವರು ಪೊಲೀಸರಿಗೆ ಗಾಯ

ಪಿಟಿಐ
Published 2 ಜನವರಿ 2024, 11:13 IST
Last Updated 2 ಜನವರಿ 2024, 11:13 IST
<div class="paragraphs"><p>ನಾಗ್ಪುರದಲ್ಲಿ ಟ್ರಕ್‌ ಚಾಲಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು</p></div>

ನಾಗ್ಪುರದಲ್ಲಿ ಟ್ರಕ್‌ ಚಾಲಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು

   

ಪಿಟಿಐ ಚಿತ್ರ

ಜೈಪುರ:  ’ಅಪಘಾತ ನಡೆಸಿ ಪರಾರಿ‘ಯಾದ (ಹಿಟ್ ಆ‍್ಯಂಡ್‌ ರನ್) ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿಯಾಗಲಿರುವ ಹೊಸ ಕಾನೂನು ವಿರೋಧಿಸಿ ದೇಶದಾದ್ಯಂತ ಟ್ರಕ್‌ ಚಾಲಕರು ನಡೆಸುತ್ತಿರುವ ಪ್ರತಿಭಟನೆ ಮುಂದಿವರಿದಿದೆ. ರಾಜಸ್ಥಾನದ ಕೆಕ್ರಿ ಜಿಲ್ಲೆಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.

ADVERTISEMENT

ಪ್ರತಿಭಟನಾ ನಿರತ ಟ್ರಕ್‌ ಚಾಲಕರು ಪೊಲೀಸ್ ವಾಹನವನ್ನು ಸುಟ್ಟುಹಾಕಿದ್ದಾರೆ. ಅಲ್ಲದೆ ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮೂವರು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರ, ಮಧ್ಯ ಪ್ರದೇಶ, ಛತ್ತೀಸಗಡ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಾಣಿಜ್ಯ ವಾಹನ, ಟ್ರಕ್‌, ಟ್ಯಾಂಕರ್‌ಗಳ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಟ್ರಕ್‌ ಚಾಲಕರ ಪ್ರತಿಭಟನೆಯಿಂದಾಗಿ ರಾಜಸ್ಥಾನ, ಪಂಜಾಬ್‌, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಪೆಟ್ರೋಲ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಣಾಮ ಹಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಅಭಾವ ತಲೆದೂರಿದೆ.

ಪ್ರತಿಭಟನೆಯಿಂದಾಗಿ ರಸ್ತೆಯಲ್ಲಿ ಸಾಲು ಸಾಲು ಟ್ರಕ್‌ಗಳು ನಿಂತಿದ್ದವು. ಟ್ರಾಫಿಕ್‌ ಜಾಮ್‌ ತೆರವುಗೊಳಿಸುವ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಸದ್ಯ ರಸ್ತೆಯನ್ನು ತೆರವುಗೊಳಿಸಲಾಗಿದ್ದು, ಭದ್ರತೆಗಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸರ್ಕಲ್‌ ಅಧಿಕಾರಿ ಸಂಜಯ್‌ ಸಿಂಗ್‌ ಹೇಳಿದ್ದಾರೆ. 

ಹಿಟ್ ಆ‍್ಯಂಡ್‌ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತಗಳನ್ನು ಉಂಟುಮಾಡಿದರೆ ಮತ್ತು ಪೊಲೀಸರಿಗೆ ತಿಳಿಸದೆ ಓಡಿಹೋದ ಚಾಲಕರಿಗೆ 10 ವರ್ಷಗಳ ಜೈಲು ಶಿಕ್ಷೆ ಅಥವಾ ₹7 ಲಕ್ಷ ದಂಡವನ್ನು ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.