ನವದೆಹಲಿ: ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ‘ಆಪರೇಷನ್ ದೋಸ್ತ್’ಅಡಿಯಲ್ಲಿ ಕಳುಹಿಸಿರುವ ಭಾರತೀಯ ಸೇನಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
‘ಗರಿಷ್ಠ ಜೀವಗಳು ಮತ್ತು ಆಸ್ತಿಯನ್ನು ಉಳಿಸಲು ನಮ್ಮ ಸೇನಾ ತಂಡಗಳು ಶಕ್ತಿ ಮೀರಿ ಯತ್ನಿಸುತ್ತಿವೆ. ಈ ನಿರ್ಣಾಯಕ ಸಮಯದಲ್ಲಿ, ಭಾರತವು ಟರ್ಕಿಯ ಜನರೊಂದಿಗೆ ದೃಢವಾಗಿ ನಿಂತಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ತಂಡಗಳು ಟರ್ಕಿಯಲ್ಲಿ ಮಾಡುತ್ತಿರುವ ಸಹಾಯದ ದೃಶ್ಯಗಳನ್ನು ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದರು. ಮೋದಿ ಆ ಟ್ವೀಟ್ ಹಂಚಿಕೊಂಡಿದ್ದಾರೆ.
‘ಭಾರತೀಯ ಸೇನೆಯ ವೈದ್ಯಕೀಯ ತಜ್ಞರ ತಂಡವು 24x7 ಕೆಲಸದಲ್ಲಿದೆ, ಗಾಯಗೊಂಡವರಿಗೆ ಪರಿಹಾರವನ್ನು ಒದಗಿಸುತ್ತದೆ’ ಎಂದು ಬಾಗ್ಚಿ ವಿಡಿಯೊದೊಂದಿಗೆ ಟ್ವೀಟ್ ಮಾಡಿದ್ದರು.
ಟರ್ಕಿಯ ಇಸ್ಕೆಂಡರುನ್ನಲ್ಲಿ ಭಾರತೀಯ ಸೇನೆ ಪ್ರಾರಂಭಿಸಿರುವ ತುರ್ತು ಆಸ್ಪತ್ರೆಯಲ್ಲಿ ಇದುವರೆಗೆ 106 ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.